ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟ
ಮಂಗಳೂರು: ಎನ್ ಐ ಟಿಕೆ ಮತ ಎಣಿಕೆ ಕೇಂದ್ರದ ಬಳಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿದ ಘಟನೆ ಮಂಗಳವಾರ ಮತ ಎಣಿಕೆ ವೇಳೆ ನಡೆದಿದ್ದು, ಮಧ್ಯ ಪ್ರವೇಶಿಸಿದ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಅಂಚೆ ಮತದಾನದಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟ 20708 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಸುರತ್ಕಲ್ ಎನ್ಐಟಿಕೆ ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಸಾರ್ವಜನಿಕರು ನಿಲ್ಲಲು ಅವಕಾಶ ನೀಡಿದ್ದರೂ ಗೇಟ್ ನಲ್ಲಿ ಪ್ರವೇಶಿಸುವಾಗ ಪೊಲೀಸರು ಅನಗತ್ಯವಾಗಿ ವಿಚಾರಿಸಿ ಗುರುತು ಚೀಟಿ ಕೇಳಿ ಕಿರಿಕಿರಿಯನ್ನುಂಟು ಮಾಡಿದ್ದಾರೆ ಎಂದು ಕೆಲವು ಮಂದಿ ಕಾರ್ಯಕರ್ತರು ದೂರಿದ್ದಾರೆ.
ಮತ ಎಣಿಕೆ ಕೇಂದ್ರದ ಬಳಿ ಬಿಜೆಪಿ ಕಾರ್ಯಕರ್ತರು ಜಮಾವಣೆಯಾಗುತ್ತಿದ್ದು ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟ ಮುನ್ಮಡೆ ಹಿನ್ನೆಲೆಯಲ್ಲಿ ಕಾರ್ಯಕರ್ತರು ಘೋಷಣೆ ಹಾಕಿ ಸಂಭ್ರಮಾಚರಣೆ ಆರಂಭಿಸಿದ್ದಾರೆ.
ಪದ್ಮರಾಜ್ ನಿರ್ಗಮನ
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮತದಾನ ಕೇಂದ್ರಕ್ಕೆ ಆಗಮಿಸಿ ನಿರ್ಗಮಿಸಿದರು. ಜಯಗಳಿಸುವ ವಿಶ್ವಾಸವಿದೆ. ಜನರ ಮನಸ್ಸನ್ನು ಗೆದ್ದಿದ್ದೇನೆ. ಇದು ಮತವಾಗಿ ಪರಿವರ್ತನೆಯಾಗುವ ವಿಶ್ವಾಸವಿದೆ. ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕಾರ್ಯಕರ್ತರಿಗೆ ವ್ಯವಸ್ಥೆ ಸರಿ ಇದೆಯಾ ಎಂದು ಪರಿಶೀಲಿಸಲು ಬಂದಿದ್ದೇನೆ ಎಂದು ಹೇಳಿದರು.