ಚಾಮರಾಜನಗರ: ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ತಂಬಾಕು ತುಂಬಾ ಪರಿಣಾಮ ಬೀರುವುದರಿಂದ ವಿದ್ಯಾರ್ಥಿಗಳು ಮತ್ತು ಯುವಕರು ತಂಬಾಕು ಬಳಕೆಯಿಂದ ದೂರವಿರಬೇಕೆಂದು ಪ್ರಾಂಶುಪಾಲರಾದ ಶಿವನಂಜಪ್ಪನವರು ತಿಳಿಸಿದರು.
ಅವರು ಅಮಚವಾಡಿ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ತಂಬಾಕು ರಹಿತ ದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಂಬಾಕು ಸೇವನೆಯ ಹವ್ಯಾಸಕ್ಕೆ ಬಲಿಯಾಗುವುದು ಸಾಮಾನ್ಯವಾಗಿದೆ. ಸಾವಿರಾರು ವಿದ್ಯಾರ್ಥಿಗಳು ಇದಕ್ಕೆ ವ್ಯಸನರಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ಕಳೆದುಕೊಂಡು ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂಬಾಕು ಸೇವನೆಯಿಂದ ಲಕ್ಷಾಂತರ ಜನರು ಮರಣ ಹೊಂದಿದ್ದಾರೆ. ದೇಹದ ಅಂಗಾಂಗಗಳ ಮೇಲೆ ತುಂಬಾ ಪರಿಣಾಮವನ್ನು ಬೀರುತ್ತಿದೆ . ಪ್ರತಿಯೊಬ್ಬರು ತಂಬಾಕು ಬಳಸುವುದಿಲ್ಲವೆಂದು ಪ್ರತಿಜ್ಞೆ ಮಾಡಬೇಕೆಂದರು.

ಉಪನ್ಯಾಸಕ ಸುರೇಶ್ಋಗ್ವೇದಿ ಮಾತನಾಡಿ, ವ್ಯಾಸಂಗದ ದಿನಗಳಲ್ಲಿ ಉತ್ತಮ ಗೆಳೆತನವನ್ನು, ಸ್ನೇಹಿತರನ್ನು ಮಾಡಿಕೊಳ್ಳಬೇಕು.. ದುಶ್ಚಟಗಳಿಗೆ ಬಲಿಯಾದಾಗ ಇಡೀ ಜೀವನವೇ ವ್ಯರ್ಥವಾಗುತ್ತದೆ. ದುಶ್ಚಟಗಳಿಗೆ ಬಲಿಯಾದಾಗ ಶಿಕ್ಷಣ ಆಸಕ್ತಿ ಕುಂಠಿತಗೊಂಡು ಫಲಿತಾಂಶವಿಲ್ಲದೆ ಜೀವನದಲ್ಲಿ ಮಾನಸಿಕವಾಗಿ ದೈಹಿಕವಾಗಿ ಆರೋಗ್ಯ ಹೀನತೆ ಉಂಟಾಗಿ ನಾಶವಾಗುವ ಜೊತೆಗೆ ಕುಟುಂಬದ ಹಾಗೂ ಊರಿನ ಗೌರವ ನಾಶವಾಗುತ್ತದೆ. ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಸಹವಾಸ ದೋಷದಿಂದ ಹಾಳಾಗದೆ ಉತ್ತಮ ಜೀವನವನ್ನು ನಡೆಸಬೇಕು. ಮಾನವ ಜನ್ಮ ಪವಿತ್ರವಾಗಿರುವುದು ಮಾನವ ಜನ್ಮದಲ್ಲಿ ಶ್ರೇಷ್ಠವಾಗಿ ಬದುಕಲು ಉತ್ತಮ ಮಾರ್ಗಗಳನ್ನು ಅನುಸರಿಸಿ ಎಂದು ತಿಳಿಸಿ ತಂಬಾಕು ರಹಿತ ದಿನದ ಪ್ರತಿಜ್ಞೆಯನ್ನು ಪ್ರತಿಯೊಬ್ಬರು ಸ್ವೀಕರಿಸಿ ಜೀವನಬಿಡಿ ತಂಬಾಕನ್ನು ಬಳಸುವುದಿಲ್ಲ ಹಾಗೂ ಕುಟುಂಬದವರು ಬಳಸದಂತೆ ಪ್ರಯತ್ನಿಸುವ ಕಾರ್ಯವನ್ನು ಮಾಡುತ್ತೇವೆ ಎಂದು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಹಿರಿಯ ಉಪನ್ಯಾಸಕರಾದ ಆರ್ ಮೂರ್ತಿರವರು ತಂಬಾಕು ರಹಿತ ದಿನದ ಮಹತ್ವವನ್ನು ತಿಳಿಸಿ ಶಾಲಾ-ಕಾಲೇಜುಗಳ ಸುತ್ತಮುತ್ತ ಯಾವುದೇ ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ. ವಿದ್ಯಾರ್ಥಿಗಳು ತಂಬಾಕು ಬಳಕೆಯಿಂದ ಆಗುವ ಅನಾಹುತಗಳನ್ನು ತಿಳಿದುಕೊಳ್ಳಬೇಕು. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಉಪನ್ಯಾಸಕರಾದ ಶಿವಸ್ವಾಮಿ, ಬಸವಣ್ಣ ಉಪಸ್ಥಿತರಿದ್ದರು. ತಂಬಾಕು ರಹಿತ ದಿನದ ಅಂಗವಾಗಿ ವಿದ್ಯಾರ್ಥಿಗಳು ಜಾಥಾ ನಡೆಸಿ ಗಮನ ಸೆಳೆದರು.