ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿ ಶ್ರದ್ಧೆಯಿಂದ ಕಲಿತರೆ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯವಾಗುತ್ತದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹರದನಹಳ್ಳಿಯಲ್ಲಿ ಅಖಿಲ ಭಾರತ ಮಟ್ಟದ ವೈದ್ಯಕೀಯ ಪ್ರವೇಶಾತಿ ಪರೀಕ್ಷೆಯಲ್ಲಿ ೭೨೦ಕ್ಕೆ ೬೭೧ ಅಂಕಗಳನ್ನು ಪಡೆಯುವ ಮೂಲಕ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ತಾಲೂಕಿನ ಗಾಯನಹಳ್ಳಿ ಗ್ರಾಮದ ಜಿ.ಎಸ್.ನಟರಾಜ್ ಮತ್ತು ಜ್ಯೋತಿ ದಂಪತಿಗಳ ಪುತ್ರ ಜಿ.ಎನ್.ತರುಣ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸುವ ಕೆಲಸವನ್ನು ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಯಾವುದೇ ಅಳುಕಿಲ್ಲದೆ ನಿಖರವಾದ ಗುರಿಯನ್ನು ಇಟ್ಟುಕೊಂಡು ತಮ್ಮ ಕಲಿಕೆಯ ಅವಧಿಯಲ್ಲಿ ಉತ್ತಮವಾಗಿ ಅಭ್ಯಾಸ ಮಾಡುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆಯಬೇಕು. ಆ ಮೂಲಕ ತಮ್ಮ ಗ್ರಾಮಕ್ಕೆ, ಕಲಿಸಿದ ಗುರುಗಳಿಗೆ ಹಾಗೂ ತಂದೆ ತಾಯಿಯರಿಗೆ ಒಳ್ಳೆಯ ಹೆಸರನ್ನು ತರಬೇಕು. ಇದಕ್ಕೆ ವಿದ್ಯಾರ್ಥಿ ತರುಣ್ ಮಾದರಿಯಾಗಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯಾವುದೇ ವ್ಯಕ್ತಿಗಳು ತಮಗೆ ದೊಡ್ಡ ಮಟ್ಟದ ಸ್ಥಾನಮಾನಗಳು ದೊರೆತಾಗ ನಮ್ಮ ಸುತ್ತಮುತ್ತಲು ಇರುವಂತಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವಂತಹ ಕೆಲಸ ಮಾಡುವುದರ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಉದ್ಯಮಿ ಸವಿತಾವಿಜಯ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎ.ಟಿ.ಗೋವಿಂದೇಗೌಡ, ಸಿಡಿಸಿ ಉಪಾಧ್ಯಕ್ಷ ಎಸ್.ಎಂ.ಪರೀಕ್ಷಿತ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಾಯನಹಳ್ಳಿ ನಟರಾಜ್, ಜ್ಯೋತಿ ಯುವ ಮುಖಂಡರಾದ ಕೃಷ್ಣೆಗೌಡ, ಪ್ರದೀಪ್ ಸೇರಿದಂತೆ ಹಲವರು ಇದ್ದರು.