ಚನ್ನಪಟ್ಟಣ: ಅಭಿಮಾನಿಗಳೆ ದೇವರು ಎಂದು ಬಾಳಿದ ಡಾ. ರಾಜ್ಕುಮಾರ್ಅವರಂತ ಮೇರುನಟರು ಜೀವಿಸಿದ ಚಿತ್ರರಂಗಕ್ಕೆ ೭೫ ವರ್ಷಗಳ ಇತಿಹಾಸ ಇದ್ದು, ಇಂತಹ ಚಿತ್ರರಂಗದ ಇತಿಹಾಸಕ್ಕೆ ಅಭಿಮಾನಿಯನ್ನು ವಿಕೃತವಾಗಿ ಹಿಂಸೆ ಮಾಡಿ ಕೊಲೆ ಮಾಡಿರುವ ನಟ ದರ್ಶನ್ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ಗೌಡರು ಆಗ್ರಹಿಸಿದರು.
ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ರಮೇಶ್ಗೌಡರ ನೇತೃತ್ವದಲ್ಲಿ ೨೦೨೩ರ ಅಕ್ಟೋಬರ್ ೫ ರಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದು ಗುರುವಾರ ನಡೆದ ೨೫೨ ನೇ ದಿನದ ಹೋರಾಟದಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ಮೇರುನಟ ಡಾ. ರಾಜ್ಕುಮಾರ್ಅವರು ಅಭಿಮಾನಿಗಳೆ ದೇವರು ಎಂದು ತಮ್ಮ ಬದಕನ್ನು ಅಭಿಮಾನಿಗಳ ಆಸೆಯಂತೆ ಕಟ್ಟಿಕೊಂಡರು. ಅದೇ ನಿಟ್ಟಿನಲ್ಲಿ ಅವರ ಸಿನಿಮಾಗಳನ್ನು ನೋಡಿ ಅಭಿಮಾನಿಗಳು ಸಹ ತಮ್ಮ ಬದುಕಿನಲ್ಲಿ ಚಿತ್ರದಲ್ಲಿ ರಾಜ್ಅವರ ಮಾರ್ಗದರ್ಶನದಲ್ಲಿ ಜೀವನ ಕಟ್ಟಿಕೊಂಡರು. ಆದರೆ ಇಂದು ನಟ ದರ್ಶನ್ ತನ್ನ ಅಭಿಮಾನಿಯ ಮರ್ಮಾಂಗಕ್ಕೆ ಹಲ್ಲೆ ಮಾಡಿ ವಿಕೃತವಾಗಿ ಕೊಲೆ ಮಾಡಿರುವ ಪ್ರಕರಣ ಖಂಡನೀಯವಾಗಿದ್ದು ಇಂತಹವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.
ಡಾ. ರಾಜ್ಕುಮಾರ್ಅವರು ತಮ್ಮ ಅಭಿಮಾನಿಗಳು ಸಿನಿಮಾ ನೋಡಿದರೆ ಮಾತ್ರ ನಾವು ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬ ಆದರ್ಶಗಳನ್ನು ಪಾಲನೆ ಮಾಡಿದ್ದರು. ಇದಕ್ಕಾಗಿ ಅಭಿಮಾನಿಗಳ ಆಸೆಯಂತೆ ಬಟ್ಟೆ ದರಿಸುವುದು, ಚಿತ್ರದಲ್ಲಿ ಕೆಲವು ನಿರ್ಬಧಿತ ದೃಶ್ಯಗಳನ್ನು (ದೂಮಪಾನ, ಮಧ್ಯಪಾನ) ಮಾಡದೆ ಅಭಿಮಾನಿಗಳ ಆಸೆಯಂತೆ ಸಿನಿಮಾ ಮಾಡಿಕೊಂಡು ಬಂದವರು. ಜೊತೆಗೆ ಆ ಕಾಲದ ನಟರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ತಮ್ಮದೇ ಸೇವೆಯ ಕೊಡುಗೆ ನೀಡಿದ್ದರು. ಆದರೆ ನಟ ದರ್ಶನ್ರು ಹಣಕ್ಕಾಗಿ ನಟನೆ ಮಾಡುವ ಪೇಡ್ನಟವಾಗಿದ್ದು ಮೋಜಿಮಸ್ತಿಯಲ್ಲೇ ಕಾಲ ಕಳೆಯುತ್ತಾ ಅಭಿಮಾನಿಗಳ ಮೇಲೆ ವಿಕೃತ ಮನಸ್ಥಿತಿ ಸಾಧಿಸಿರುವುದು ಸಿನಿಮಾರಂಗಕ್ಕೆ ಕಳಂಕವಾಗಿದೆ ಇವರ ಎಲ್ಲಾ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಕಿಡಿಕಾರಿದರು.
ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ನಿಸ್ಪಕ್ಷಪಾತವಾಗಿ ತನಿಖೆ ಮಾಡುತ್ತಿದ್ದು, ಸಾಕ್ಷಿ ಆಧಾರಗಳ ಜೊತೆ ದರ್ಶನ್ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯವಾಗಿದ್ದು ಈ ಪ್ರಕರಣದಲ್ಲಿ ಮೃತ ರೇಣುಕಾಸ್ವಾಮಿಗೆ ನ್ಯಾಯ ಸಿಗಬೇಕು ಎಂದರೆ ರಾಜಕಾರಣಿಗಳು ಹಸ್ತ ಕ್ಷೇಪ ಮಾಡದೆ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಬೇಕು ಎಂದು ರಮೇಶ್ಗೌಡರು ಆಗ್ರಹಿಸಿದರು.
ನಿವೃತ್ತ ಪ್ರಾಂಶುಪಾಲರು ಹಾಗೂ ಚನ್ನಪಟ್ಟಣ ಸ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷರಾದ ನಿಂಗೇಗೌಡರು (ಎನ್ಜಿ) ಮಾತನಾಡಿ, ಇಂದಿನ ನಟರು ಒಂದು ಸಿನಿಮಾ ಪ್ರಸಿದ್ದಿ ಆದರೆ ನಾವೇ ಚಿತ್ರರಂಗದ ಮೇರು ನಟರು ಎಂದು ಬೀಗುತ್ತಿದ್ದಾರೆ. ಜೊತೆಗೆ ದೇವಸ್ಥಾನಕ್ಕೆ ಹೋದರೂ ಸಹ ಅಭಿಮಾನಿಗಳ ಹೆಸರಲ್ಲಿ ಪುಂಡರನ್ನು ರಕ್ಷಕರನ್ನಾಗಿ ಹಿಂದೆ ಮುಂದೆ ನಿಲ್ಲಿಸಿಕೊಂಡು ಓಡಾಡುತ್ತಾರೆ. ಆದರೆ ವರನಟ ಡಾ. ರಾಜ್ಕುಮಾರ್ಅವರು ನೂರಾರು ಸಿನಿಮಾ ಮಾಡಿದ್ದರೂ ಸಹ ಅವರಲ್ಲಿ ಸರಳತೆ ಮತ್ತು ಅಭಿಮಾನಿಗಳ ಮೇಲಿನ ಗೌರವ ಕಡಿಮೆ ಆಗಿರಲಿಲ್ಲ. ೩೫ ವರ್ಷಗಳ ಹಿಂದೆ ನಾನು ಕೆಂಗಲ್ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಪಕ್ಕದಲ್ಲಿ ಬಿಳಿಶರ್ಟ್, ಪಂಚೆಯಲ್ಲಿ ಬಂದು ನಿಂತ ಡಾ. ರಾಜ್ಕುಮಾರ್ಅವರು ಏಕಾಂಗಿಯಾಗಿ ಬಂದಿದ್ದರು.
ನಮಸ್ಕಾರಕ್ಕೆ ಪ್ರತಿನಮಸ್ಕಾರ ಮಾಡಿದ ಅವರು ಪೂಜೆಯ ಬಳಿಕ ದೇವಸ್ಥಾನ ಪುರೋಹಿತರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದನ್ನು ನೋಡಿ ಅವರ ಸರಳತೆ ಮತ್ತು ದೈವ ಭಕ್ತಿಗೆ ಸಾಕ್ಷಿಯಾಗಿದೆ. ಜೊತೆಗೆ ಡಾ.ರಾಜ್ಅವರು ನಮ್ಮ ಪ್ರಾಣ ಹೋದರೂ ನಮ್ಮ ಕಣ್ಣುಗಳು ನಾಲ್ಕು ಮಂದಿಗೆ ಬೆಳಕಾಗಲಿ ಎಂದು ನೇತ್ರದಾನದ ಮೂಲಕ ಪ್ರೇರೇಪಣೆ ಆದರು. ಆದರೆ ನಟ ದರ್ಶನ್ಅವರು ಅಭಿಮಾನಿಯನ್ನು ನಿರ್ಧಹಿಯಾಗಿ ಕೊಂದು ಕಸದ ರಾಶಿಗೆ ಎಸೆದಿರುವುದು ಆತನ ವಿಕೃತ ಮನಸ್ಸಿಗೆ ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು, ಇಲ್ಲವಾರದೆ ಇವರನ್ನು ಅನುಸರಿಸುವ ಅಭಿಮಾನಿಗಳಿಂದ ಸಾಕಷ್ಟು ಪ್ರಾಣಗಳು ಕಳೆದುಕೊಳ್ಳುತ್ತವೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಮೇಕೆದಾಟು ಅಣೆಕಟ್ಟೆ ಮತ್ತು ಕಾವೇರಿ ನದಿ ನೀರು ಹಂಚಿಕೆ ವಿಚಾರದಲಿ ಸಂಕಷ್ಟ ಸೂತ್ರ ರಚಿಸುವ ಬಗ್ಗೆ ರಾಜ್ಯದಿಂದ ಆಯ್ಕೆಯಾಗಿರುವ ಐವರು ಕೇಂದ್ರ ಸಚಿವರು ಹೆಚ್ಚು ಗಮನ ನೀಡಬೇಕು ಎಂದು ಒತ್ತಾಯಿಸಿದರು.ಸಂದರ್ಭದಲ್ಲಿ ಬೇವೂರು ಯೋಗೀಶ್ಗೌಡ, ಮಳೂರುಪಟ್ಟಣ ರವಿ, ಬೈರಾಪಟ್ಟಣ ತಿಮ್ಮೇಗೌಡ, ರಾಜು, ಕುಮಾರ್, ಜಯರಾಮು, ಹುಚ್ಚಪ್ಪ, ಚಿಕ್ಕಣ್ಣಪ್ಪ, ಸಿದ್ದಯ್ಯ, ಪುನಿತ್, ಅಜಯ್, ಶ್ಯಾನುಬೋಗನಹಳ್ಳಿ ಮತ್ತೀರವಿ, ಪಾನಿಪುರಿ ಚನ್ನಪ್ಪ, ಚಿಕ್ಕೇನಹಳ್ಳಿ ಸಿದ್ದಪ್ಪ ಇತರರು ಇದ್ದರು.

—