ನವದೆಹಲಿ: ಜನರಲ್ ಉಪೇಂದ್ರ ದ್ವಿವೇದಿ ಅವರು ಭಾರತದ ಸೇನಾ ಪಡೆಯ 30ನೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಜನರಲ್ ಮನೋಜ್ ಸಿ ಪಾಂಡೆ ಅವರ ಸೇವಾವಧಿ ಮುಗಿದ ಹಿನ್ನೆಲೆಯಲ್ಲಿ ಜೂನ್ 11ರಂದು ಉಪೇಂದ್ರ ದ್ವಿವೇದಿ ಅವರು ಸೇನಾ ಪಡೆಯ ಪರಮೋಚ್ಚ ಪದವಿಗೆ ಆಯ್ಕೆಯಾಗಿದ್ದರು. ಇದಕ್ಕೆ ಮುನ್ನ ನಾಲ್ಕು ತಿಂಗಳ ಕಾಲ ಸೇನಾ ಪಡೆಯ ವೈಸ್ ಚೀಫ್ ಆಗಿ ಕೆಲಸ ಮಾಡಿದ್ದರು. ಈ ಹಂತಕ್ಕೆ ಬರುವ ಮುನ್ನ ಅವರು ಸೇನಾ ಪಡೆಯ ವಿವಿಧ ಸ್ತರ ಮತ್ತು ಹುದ್ದೆಗಳಲ್ಲಿ ಕೆಲ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇತ್ಯಾದಿ ಹೊಸ ಆವಿಷ್ಕಾರಗಳನ್ನು ಸೇನಾ ಪಡೆಗೆ ನಿಯೋಜಿಸಬೇಕು. ಅತ್ಯಾಧುನಿಕ ಸಮರ ಕಲೆಗಳನ್ನು ಅಳವಡಿಸಬೇಕೆನ್ನುವ ಮನೋಭಾವದ ಜನರಲ್ ಉಪೇಂದ್ರ ದ್ವಿವೇದಿ ಸರಿಯಾದ ಸಂದರ್ಭದಲ್ಲಿ ಸೇನಾ ಪಡೆ ಚುಕ್ಕಾಣಿ ಹಿಡಿಯುತ್ತಿದ್ದಾರೆ.
ನೌಕಾಪಡೆ ಮುಖ್ಯಸ್ಥರಾಗಿರುವ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಮತ್ತು ಈಗ ಸೇನಾ ಪಡೆ ಮುಖ್ಯಸ್ಥರಾಗಿರುವ ಉಪೇಂದ್ರ ದ್ವಿವೇದಿ ಇಬ್ಬರೂ ಒಂದು ಕಾಲದಲ್ಲಿ ಸಹಪಾಠಿಗಳಾಗಿದ್ದರು. 60 ವರ್ಷ ವಯಸ್ಸಿನ ಈ ಇಬ್ಬರು ಮಧ್ಯಪ್ರದೇಶದ ರೇವಾ ನಗರದ ಸೈನಿಕ್ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಒಟ್ಟಿಗೆ ಓದಿದ್ದರು. ಈಗ ಐವತ್ತು ವರ್ಷದ ಬಳಿಕ ರಕ್ಷಣಾ ವಿಭಾಗದಲ್ಲಿ ಸಹವರ್ತಿಗಳಾಗಿದ್ದಾರೆ.
1964ರ ಜುಲೈ 1ರಂದು ಹುಟ್ಟಿದ ಜನರಲ್ ಉಪೇಂದ್ರ ದ್ವಿವೇದಿ ಅವರು ಚೀನಾ ಮತ್ತು ಪಾಕಿಸ್ತಾನ ವಿಚಾರದಲ್ಲಿ ಸಾಕಷ್ಟು ಕಾರ್ಯಾಚರಣೆಯ ಅನುಭವ ಹೊಂದಿದ್ದಾರೆ. ಚೀನಾ ಗಡಿ ಭಾಗದಲ್ಲಿ ಕಾರ್ಯಾಚರಿಸುವ ನಾರ್ತರ್ನ್ ಕಮಾಂಡ್ನ ಮುಖ್ಯ ಕಮಾಂಡರ್ ಆಗಿ 2022ರಿಂದ 2024ರವರೆಗೂ ಅವರು ಕೆಲಸ ಮಾಡಿದ್ದಾರೆ.