ಮಡಿಕೇರಿ : ಕಾಳುಮೆಣಸು ಕೊಡಗು ಜಿಲ್ಲೆಯ ಬಹು ವಾರ್ಷಿಕ ಸಾಂಬಾರು ಬೆಳೆ. ಇದನ್ನು ಕಾಫ಼ಿ, ಅಡಿಕೆ, ಏಲಕ್ಕಿ ತೋಟದಲ್ಲಿ ಅಂತರ ಬೆಳೆಯಾಗಿ ಜಿಲ್ಲೆಯಾದ್ಯಂತಹ ಬೆಳೆಯಲಾಗುತ್ತಿದೆ. ಇತ್ತೀಚೆಗೆ ಕಾಳು ಮೆಣಸು ಬೆಳೆಗೆ ಅನೇಕ ರೋಗಗಳು ತೀವ್ರಗತಿಯಲ್ಲಿ ಕಂಡು ಬರುತ್ತಿದ್ದು, ಕೃಷಿಕನಿಗೆ ಹೆಚ್ಚು ಆರ್ಥಿಕ ಹಾನಿಯನ್ನುಂಟು ಮಾಡುತ್ತೀವೆ.
ಅದರಲ್ಲಿಯೂ ಮುಖ್ಯವಾಗಿ ಇತ್ತೀಚೆಗೆ ಕೊಡಗು ಜಿಲ್ಲೆಯಾದ್ಯಂತಹ ಕಾಫ಼ಿ ತೋಟದಲ್ಲಿ ಬೆಳೆಸಲಾಗುತ್ತಿರುವ ಕಾಳುಮೆಣಸಿನ ಬಳ್ಳಿಗಳಲ್ಲಿ ಎಲೆಗಳು ಚಿಕ್ಕದಾಗಿ, ಬಳ್ಳಿಗಳು ಸಾಯುವುದು ಇಲ್ಲ ಅಥವಾ ಬೆಳವಣಿಗೆಯೂ ಇಲ್ಲದೆ, ಕಾಳುಮೆಣಸು ಬಿಡದೆ ಇರುವ ಬಳ್ಳಿಗಳು ದಿನೇ ದಿನೇ ಹೆಚ್ಚಾಗುತ್ತಿರುತ್ತವೆ. ಇದಕ್ಕೆ ಮೂಲ ಕಾರಣ ನಂಜಾಣುವಿನ ಭಾದೆಗೆ ತುತ್ತಾಗುತ್ತಿರುವುದು.
ಈ ನಿಟ್ಟಿನಲ್ಲಿ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಂಜಾಣುವಿನ ಭಾದೆಗೆ ತುತ್ತಾಗಿರುವ ಬಳ್ಳಿಗಳನ್ನು ಪುನಶ್ಚೇತನಗೂಳಿಸಲು ಕೇರಳ ರಾಜ್ಯದ ಕ್ಯಾಲಿಕಟ್ ಭಾರತೀಯ ಸಾಂಬಾರು ಬೆಳೆಗಳ ಸಂಶೋಧನ ಸಂಸ್ಥೆ ಅವರು ಶಿಫಾರಸ್ಸು ಮಾಡಿರುವ ಸಮಗ್ರ ತಂತ್ರಜ್ಞಾನಗಳ ಪರಿಚಯವನ್ನು ರೈತರಿಗೆ ತಿಳಿಸಲು ಜಿಲ್ಲೆಯ ೧೦ ತೋಟಗಳಲ್ಲಿ ಮೂಂಚೂಣಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ.
ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಇದರ ಸಸ್ಯ ಸಂರಕ್ಷಣಾ ತಜ್ಞರಾದ ಡಾ.ಕೆ.ವಿ.ವೀರೇಂದ್ರ ಕುಮಾರ್ ಇವರು ವಿವಿದ ಸಮಗ್ರ ರೋಗ ನಿರ್ವಹಣಾ ತಂತ್ರಜ್ಞಾನಗಳಾದ ವರ್ಷದಲ್ಲಿ ಜೂನ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಪೆಪ್ಪೆರ್ ಸ್ಪೇಷಲ್ ಮತ್ತು ಸಮುದ್ರ ಕಳೆಯ ಸಿಂಪರಣೆ, ಕಹಿ ಬೇವಿನ ಹಿಂಡಿಯ ಪುಡಿಯನ್ನು ಬುಡಕ್ಕೆ ಹಾಕುವ ಮತ್ತು ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಬುಡಕ್ಕೆ ಸುರಿಯುವ, ಡಿಸೆಂಬರ್ ತಿಂಗಳಿನಲ್ಲಿ ಪೊಟ್ಯಾಷಿಯಂ ನೈಟ್ರೇಟ್ನ ಸಿಂಪರಣೆ ಮಾಡುವ ಪ್ರಾತ್ಯಕ್ಷಿಕೆಯನ್ನು ಕೊಣನಕಟ್ಟೆಯ ಕುಶಾಲಪ್ಪನವರ ತೋಟದಲ್ಲಿ ತೋರಿಸಿಕೊಟ್ಟರು. ಈ ಸಮಗ್ರ ತಂತ್ರಜ್ಞಾನಗಳನ್ನು ಕಾಳುಮೆಣಸಿನ ತೋಟಗಳಲ್ಲಿ ಅಳವಡಿಸಿಕೊಂಡರೆ ನಂಜಾಣುವಿನ ಭಾದೆಗೆ ತುತ್ತಾಗಿರುವ ಬಳ್ಳಿಗಳನ್ನು ಪುನಶ್ಚೇತನಗೊಳಿಸಬಹುದು ಎಂದು ತಿಳಿಸಿದರು.