ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ನಿರುದ್ಯೋಗ ಸಮಸ್ಯೆ ದೊಡ್ಡ ಸದ್ದು ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಗೆ ಹಲವು ಯೋಜನೆಗಳನ್ನು ತನ್ನ ಬಜೆಟ್ನಲ್ಲಿ ಪ್ರಕಟಿಸಿದೆ.
ಲೋಕಸಭೆಯಲ್ಲಿ ತಮ್ಮ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಯ ಭಾಗವಾಗಿ, ಔಪಚಾರಿಕ ವಲಯ ಮತ್ತು ಉತ್ಪಾದನಾ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗ ಪಡೆದ ಎಲ್ಲರಿಗೂ ಸರ್ಕಾರ ಒಂದು ತಿಂಗಳ ವೇತನವನ್ನು ನೀಡಲಿದೆ ಎಂದು ಹೇಳಿದರು.
ಒಂದು ತಿಂಗಳ ಸಂಬಳದ ನೇರ ಲಾಭ ವರ್ಗಾವಣೆ (DBT) ಮೂಲಕ 15,000 ರೂ. ಹಣವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ.
ತಿಂಗಳಿಗೆ ಗರಿಷ್ಟ 1 ಲಕ್ಷ ರೂ. ಸಂಬಳ ಪಡೆಯುವ ಉದ್ಯೋಗಿಗಳು ಈ ಯೋಜನೆಯ ಲಾಭ ಪಡೆಯಬಹುದು. ಈ ಪ್ರಯೋಜನಗಳನ್ನು ಪಡೆಯಲು ಉದ್ಯೋಗಿಗಳು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಈ ಯೋಜನೆಯಿಂದ ಸುಮಾರು 2.10 ಹೊಸ ಉದ್ಯೋಗಿಗಳಿಗೆ ಲಾಭ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.