ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ, ಬೀದಿ ಬದಿ ವ್ಯಾಪಾರಸ್ಥರ ಸಂಘ ತಲಪಾಡಿ ವತಿಯಿಂದ ಹೆದ್ದಾರಿ ಬದಿಯ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಕಿರುಕುಳ ನೀಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಬೀದಿ ಬದಿ ವ್ಯಾಪಾರಸ್ಥರ ಬೃಹತ್ ಸಮಾವೇಶ ತಲಪಾಡಿ ಮರಿಯಾಶ್ರಮದ ಹಳೆ ಚರ್ಚ್ ಹಾಲ್ ನಲ್ಲಿಂದು ನಡೆಯಿತು.
ಬೀದಿ ಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ ಇಂತಿಯಾಝ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಮ್ಮ ಬಡ ಬೀದಿವ್ಯಾಪಾರಿಗಳ ವಿರುದ್ಧ ಕಾರ್ಯಾಚರಣೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಗ್ರಾಮ ಪಂಚಾಯತ್, ಪುರಸಭಾ, ಪಟ್ಟಣ ಪಂಚಾಯತ್, ನಗರಸಭೆ, ಪಾಲಿಕೆ ವ್ಯಾಪ್ತಿಯಲ್ಲಿರುವ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಅವರಿಗೆ ಗುರುತಿನ ಚೀಟಿಯನ್ನು ಕೊಡುವಂತಹ ಮತ್ತು ಅವರ ಬದುಕಿನ ಹಕ್ಕನ್ನು ರಕ್ಷಣೆ ಮಾಡುವ ಎಲ್ಲಾ ರೀತಿಯ ಸಹಕಾರವನ್ನು ಕೊಡುವಂತಹ ಕೆಲಸವನ್ನು ಸ್ಥಳೀಯ ಸಂಸ್ಥೆ ಮಾಡಬೇಕು. ಪೋಲೀಸರು ಮತ್ತು ಅಧಿಕಾರಿಗಳಿಂದ ಕಿರುಕುಳವನ್ನು ನಿಲ್ಲಿಸಬೇಕು, ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತಕ್ಷಣ ಅವರ ಕಾರ್ಯಾಚರಣೆಯನ್ನು ನಿಲ್ಲಿಸಿಬಡ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಅಗಸ್ಟ್ 1 ರಂದು ಬೃಹತ್ ಪ್ರತಿಭಟನೆಯನ್ನು ತಲಪಾಡಿಯಲ್ಲಿ ನಡೆಸಲಿದ್ದೇವೆ ಎಂದರು.

ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ನಮ್ಮ ಬದುಕನ್ನು ನಾಶ ಮಾಡಲು ಹೊರಟಿರುವವರಿಗೆ ನಾವು ಎಚ್ಚರಿಸಲು ಇಂದು ಸೇರಿದ್ದೇವೆ, ರಾಷ್ಟ್ರೀಯ ಹೆದ್ದಾರಿಪ್ರಾಧಿಕಾರ ದವರು ಅನ್ಯಾಯ ಮಾಡುತ್ತಾರೆ,ನಾವು ಯಾರಿಗೂ ತೊಂದರೆ ಮಾಡದೆ ಪ್ರಾಮಾಣಿಕವಾಗಿ ಬದುಕನ್ನು ನಿರ್ವಹಿಸುತ್ತಿದ್ದೇವೆ, ನಾವು ಬೀದಿ ಬದಿಯಲ್ಲಿ ಕೆಲಸ ಮಾಡದೆ ಹೋದರೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುತಿತ್ತು,
ನಾವು ನಿರುದ್ಯೋಗ ಪಟ್ಟಿಯಿಂದ ಹೊರಬಂದು ಬೀದಿ ಬದಿಯಲ್ಲಿ ವ್ಯಾಪಾರ ಮಾಡಿ ಇಂದು ನಮ್ಮ ಸಂಸಾರದ
ಕನಿಷ್ಟ ನಾಲ್ಕು ಜನರ ಬದುಕನ್ನು ನಡೆಸುತ್ತಿದ್ದೇವೆ ಆದರೂ ಕಷ್ಟದಲ್ಲಿ ಕೆಲಸಮಾಡುವ ಬೀದಿ ಬದಿ ವ್ಯಾಪಾರಿಗಳ ಮೇಲೆ ಇವರು ಸವಾರಿ ಮಾಡುತ್ತಿದ್ದಾರೆ ಎಂದರು.
ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಸುರೇಖಾ ಚಂದ್ರಹಾಸ್ ಮಾತನಾಡಿ ಬದುಕನ್ನು ಹತ್ತಿಕ್ಕುವವರ ವಿರುದ್ಧ ಹೋರಾಟ ಮಾಡುವುದು ನಮ್ಮ ಹಕ್ಕು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಪ್ರಮುಖ ಅಧಿಕಾರ ಸುಪ್ರೀಮ್ ಆದೇಶವನ್ನು ಕೈಯಲ್ಲಿ ಹಿಡಿದು ಬಡವರ ಹಕ್ಕನ್ನು ಕಸಿಯುತ್ತಿದ್ದಾರೆ, ಈಗಲಾದರೂ ನಾವು ಎಚ್ಚೆತ್ತು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದರು. ಸಾಮಾಜಿಕ ಕಾರ್ಯಕರ್ತ ಯಶು ಪಕ್ಕಳ ಸ್ವಾಗತಿಸಿದರು.
ಸೃಜನ್ ಕಾರ್ಯಕ್ರಮ ನಿರೂಪಿಸಿದರು.