ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ಪಟ್ಟಣದಾದ್ಯಂತ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಪುಟ್ಟ ಮಕ್ಕಳು ಹಾಗೂ ಜನಸಾಮಾನ್ಯರು ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ತಾಲ್ಲೂಕು ಅಧ್ಯಕ್ಷ ನದೀಂ ಉಲ್ಲಾ ಖಾನ್ ಪುರಸಭೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆಯ ಪ್ರಭಾರೆ ಮುಖ್ಯಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಅವರು ಮುಸ್ಲಿಂ ಬಡಾವಣೆಯ ನಿವಾಸಿ ಫಜಲ್ ಖಾನ್ ರವರ ಮಗ ಇಮ್ರಾನ್ ಖಾನ್ ಗೆ ನಾಯಿಗಳ ಹಿಂಡು ಮನೆಯೊಳಗೆ ನುಗ್ಗಿ ಎಳೆದು ಹೊರತಂದು ಮಾರಣಾಂತಿಕವಾಗಿ ಕಚ್ಚಿ ಜಖಂ ಗೊಳಿಸಿವೆ ಸರಿಯಾದ ಸಮಯಕ್ಕೆ ಜನರು ಧಾವಿಸಿದ್ದರಿಂದ ದೊಡ್ಡ ಅನಾಹುತದಿಂದ ರಕ್ಷಿಸಿದ್ದಾರೆ ಆದರೆ ಸಾವು ನೋವು ಸಂಭವಿಸುತ್ತಿದ್ದರೆ ಇದಕ್ಕೆ ಯಾರು ಹೊಣೆ ಎಂದು ಮುಖ್ಯಾಧಿಕಾರಿಯವರಿಗೆ ಪ್ರಶ್ನಿಸಿದರು.
ಸಾರ್ವಜನಿಕರು ಹಾಗೂ ವಾಹನ ಸವಾರರು ಬೀದಿಗಳಲ್ಲಿ ತಿರುಗಾಡುವಾಗ ಬೀದಿ ನಾಯಿಗಳ ಹಿಂಡು ಸಾಮೂಹಿಕವಾಗಿ ಮೇಲೆ ದಾಳಿ ಮಾಡುತ್ತವೆ ಬೈಕ್, ಕಾರುಗಳ ಹಿಂದೆ ನಾಯಿಗಳು ಅಟ್ಟಿಸಿಕೊಂಡು ಬರುತ್ತಿರುವ ಪರಿಣಾಮ ವಾಹನ ಸವಾರರಿಗೆ ನಡುಕ ಶುರುವಾಗಿದೆ. ಆತಂಕದಿoದ ಹಲವರು ವಾಹನಗಳಿಂದ ಬಿದ್ದು ಪೆಟ್ಟುಮಾಡಿಕೊಂಡಿರುವ ಘಟನೆಗಳು ಸಹ ಜರುಗಿವೆ ಎಂದರು.
ಬೀದಿ ನಾಯಿಗಳ ಹಾವಳಿ ಬಗ್ಗೆ ಹಲವು ಬಾರಿ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿದ್ದರೂ ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲದಿರುವುದು ಸಾರ್ವಜನಿಕರ ಬೇಸರಕ್ಕೆ ಕಾಣವಾಗಿದೆ. ನೆಪಕ್ಕೆ ಸಭೆಯಲ್ಲಿ ಚರ್ಚೆ ನಡೆಸುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಾರ್ವಜನಿಕರ ಹಿತ ಕಾಯುವಲ್ಲಿ ನಿರ್ಲಕ್ಷ ತೋರುತ್ತಿದ್ದಾರೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಶಾಲೆಗೆ ಮಕ್ಕಳು ಹೋಗಲು ಹಾಗೂ ಬೆಳಗ್ಗೆ ಸಮಯದಲ್ಲಿ ಮದರಸಗಳಿಗೆ ತೆರಳುವ ಪುಟ್ಟ ಮಕ್ಕಳು ರಸ್ತೆಯಲ್ಲಿ ಭಯದಿಂದ ಹೋಗುವಂತಾಗಿದೆ. ಒಂದು ವಾರದ ಹಿಂದೆ ನಗರದ ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿಗಳು ಅಧಿಕ ಹೆಚ್ಚು ಮಕ್ಕಳು ಮೇಲೆ ದಾಳಿ ನಡೆಸಿದೆ. ಮಕ್ಕಳನ್ನು ಶಾಲೆಗೆ ಕಳಿಸುವಾಗ ಪೋಷಕರು ಆತಂಕಗೊಳ್ಳುತ್ತಿದ್ದಾರೆ. ಪುರಸಭೆಯ ಅಧಿಕಾರಿಗಳು ಕೂಡಲೇ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಜಾಹೀದ್, ಸೈಯದ್ ಇರ್ಫಾನ್, ಮುಹೀಬ್, ಮೊಹಮ್ಮದ್ ಅವೇಝ್ ಮತ್ತು ಮೊಹಮ್ಮದ್ ನವಾಝ್ ಸೇರಿದಂತೆ ಇನ್ನಿತರರು ಹಾಜರಿದ್ದರು.