ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರಾಜ್ಯ ಸರ್ಕಾರ ಎಪಿಎಂಸಿ ಕಾಯಿದೆಯನ್ನು ತಿದ್ದುಪಡಿ ಮಾಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿದ್ದು ಎಲ್ಲರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಎಪಿಎಂಸಿ ಆಡಳಿತ ಕಛೇರಿಯ ಸುತ್ತಲಿನ ರಸ್ತೆಗಳಿಗೆ 2.50 ಕೋಟಿ ರೂಗಳ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ಚಾಲನೆ ನೀಡಿ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಮತ್ತು ಕೆ.ಆರ್.ನಗರದ ಎಪಿಎಂಸಿ ಆವರಣದಲ್ಲಿ ಶೀಥಲೀಕರಣ ಘಟಕ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಜತೆಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಬಹು ನಿರೀಕ್ಷಿತ ಎಪಿಎಂಸಿ ಕಾಯಿದೆಗೆ ತಿದ್ದುಪಡಿಯ ಮೂಲಕ ಅಮೂಲಾಗ್ರ ಬದಲಾವಣೆ ತಂದಿದ್ದು ಇದರಿಂದ ರೈತರಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿ ಅವರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಲಿದ್ದು ಇದಕ್ಕಾಗಿ ನಾನು ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಹೆಬ್ಬಾಳು ಹೋಬಳಿಯ ಪವಿತ್ರ ಕ್ಷೇತ್ರವಾಗಿರುವ ಕಪ್ಪಡಿಯಿಂದ ಗಂಧನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಲು ಸರ್ಕಾರದಿಂದ 25 ಕೋಟಿ ರೂ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಮುಖ್ಯಮಂತ್ರಿಗಳನ್ನು ಕರೆಯಿಸಿ ಕಾಮಗಾರಿಗೆ ಚಾಲನೆ ಕೊಡಿಸುವುದಾಗಿ ಪ್ರಕಟಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆಯುತ್ತಿದ್ದ ಶುಕ್ರವಾರ ಸಂತೆ ಕೋರೋನಾ ಸಂದರ್ಭದಲ್ಲಿ ಸ್ಥಗಿತವಾದ ಹಿನ್ನೆಲೆಯಲ್ಲಿ ಆರು ತಿಂಗಳ ಹಿಂದೆ ಪುನರಾರಂಭ ಮಾಡಲಾಗಿತ್ತು ಆದರೆ ಅದಕ್ಕೆ ಸಾರ್ವಜನಿಕರು ಮತ್ತು ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ಹಳ್ಳಿಗಾಡಿನ ಸೊಗಡಿನ ಸಂಸ್ಕೃತಿಯ ಪ್ರತೀಕವಾಗಿರುವ ನಮ್ಮೂರಿನ ಸಂತೆಯ ಉಳಿವಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಕೆಡಗನಟರಾಜು, ಬಿ.ಎಂ.ನಾಗರಾಜು, ಮಾಜಿ ಉಪಾಧ್ಯಕ್ಷ ಹೆಚ್.ಹೆಚ್.ನಾಗೇಂದ್ರ, ನಿರ್ದೇಶಕರಾದ ಎಸ್.ಸಿದ್ದೇಗೌಡ ಎಲ್.ಪಿ.ರವಿಕುಮಾರ್, ಜಿ.ಪಂ ಮಾಜಿ ಸದಸ್ಯರಾದ ಮಾರ್ಚಹಳ್ಳಿಶಿವರಾಮು, ಜಿ.ಆರ್.ರಾಮೇಗೌಡ, ಜಯರಾಮೇಗೌಡ, ಪುರಸಭೆ ಸದಸ್ಯರಾದ ಶಿವುನಾಯಕ್, ಶಂಕರ್, ನಟರಾಜು, ಶಂಕರ್ಸ್ವಾಮಿ, ಮಾಜಿ ಸದಸ್ಯ ಕೆ.ವಿನಯ್, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕರಾದ ಕೆ.ಎನ್.ಪ್ರಸನ್ನಕುಮಾರ್, ಸರಿತಾಜವರಪ್ಪ, ಉದ್ಯಮಿ ಪಿಕೆಎಂ ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ನಗರಾಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸೈಯದ್ಜಾಬೀರ್, ಮುಖಂಡರಾದ ಹೆಚ್.ಎಸ್.ವೇಣುಗೋಪಾಲ್, ಲೋಕೇಶ್, ನವೀದ್, ನಂದೀಶ್, ಕಂಠಿಕುಮಾರ್, ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಎಪಿಎಂಸಿ ಹೆಚ್ಚುವರಿ ನಿರ್ದೇಶಕ ಮಂಜುನಾಥ್, ಉಪನಿರ್ದೇಶಕಿ ಸಂಗೀತ, ಕಾರ್ಯದರ್ಶಿ ಮಹೇಶ್ ಮತ್ತಿತರರು ಇದ್ದರು.