ಬೆಂಗಳೂರು: ‘ಕನ್ನಡತಿ’ ಮೂಲಕ ಫೇಮಸ್ ಆದ ನಟ ಕಿರಣ್ ರಾಜ್ ಅವರಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಕಿರಣ್ ರಾಜ್ ಎದೆ ಭಾಗಕ್ಕೆ ಪೆಟ್ಟಾಗಿದ್ದು, ಕಾರಿಗೆ ಹಾನಿ ಆಗಿದೆ. ಅಪಘಾತದ ಬಳಿಕ ಕಿರಣ್ ರಾಜ್ ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದರು. ಕಿರಣ್ ರಾಜ್ಗೆ ಕೆಂಗೇರಿ ಬಳಿಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಿರಣ್ ರಾಜ್ ನಟನೆಯ ‘ರಾನಿ’ ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ಈ ರೀತಿ ಆಗಿದೆ.
ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಬೆಂಗಳೂರಿನ ಕೆಂಗೇರಿ ಬಳಿ ಕಾರಿಗೆ ಅಡ್ಡವಾಗಿ ಬಂದ ಮುಂಗುಸಿಯನ್ನು ತಪ್ಪಿಸಲು ಹೋಗಿ ಕಾರು ಡಿವೈಡರ್ಗೆ ಗುದ್ದಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಕಾರಿನಲ್ಲಿ ‘ರಾನಿ’ ಚಿತ್ರದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ ಕೂಡ ಪ್ರಯಾಣಿಸುತ್ತಿದ್ದರು. ಅವರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ನಿನ್ನೆ ರಾತ್ರಿ(ಸೆಪ್ಟಂಬರ್ 10) ಗುಟ್ಟಯ್ಯನ ಪಾಳ್ಯ ಬಳಿ ಇರುವ ನಿರಾಶ್ರಿತರ ಕೇಂದ್ರಕ್ಕೆ ಊಟ ನೀಡಲು ಹೋಗುವ ಸಮಯದಲ್ಲಿ ಕಾರು ಅಪಘಾತವಾಗಿದೆ. ಮರ್ಸಿಡಿಸ್ ಬೆನ್ಜ್ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಿರಣ್ ರಾಜ್ಗೆ ಪ್ರತಿವಾರ ನಿರಾಶ್ರಿತರ ಕೇಂದ್ರಕ್ಕೆ ಊಟ ಕೊಡುವ ಅಭ್ಯಾಸವಿತ್ತು. ಅದೇ ರೀತಿ ಈ ಬಾರಿ ಹೋಗುವಾಗ ಈ ದುರ್ಘಟನೆ ನಡೆದಿದೆ. ಹಿಂದಿ ಧಾರಾವಾಹಿಗಳಲ್ಲಿ ಮೊದಲಿಗೆ ನಟಿಸಿದ ಕಿರಣ್ ರಾಜ್ ಬಳಿಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ‘ಕನ್ನಡತಿ’ ಧಾರಾವಾಹಿಯ ಹರ್ಷ ಪಾತ್ರ ಒಳ್ಳೆ ಹೆಸರು ತಂದುಕೊಟ್ಟಿತ್ತು.
ಸೆಪ್ಟೆಂಬರ್ 12ರಂದು ಅವರ ನಟನೆಯ ‘ರಾನಿ’ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾ ರಿಲೀಸ್ ಸಮಯದಲ್ಲೇ ಈ ಅಪಘಾತ ನಡೆದಿರುವುದು ಬೇಸರದ ಸಂಗತಿ. ಸೀಟ್ ಬೆಲ್ಟ್ ಧರಿಸಿದ್ದರಿಂದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ಗೆ ಪೆಟ್ಟಾಗಿಲ್ಲ. ಆದರೆ ಕಿರಣ್ ರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗ್ತಿದೆ.