Sunday, April 20, 2025
Google search engine

Homeರಾಜ್ಯಈದ್‌–ಮಿಲಾದ್ ಮೆರವಣಿಗೆ: ಹಲವೆಡೆ ವಾಹನ ಸಂಚಾರ ಬಂದ್​, ಬದಲಿ ಮಾರ್ಗದ ವ್ಯವಸ್ಥೆ

ಈದ್‌–ಮಿಲಾದ್ ಮೆರವಣಿಗೆ: ಹಲವೆಡೆ ವಾಹನ ಸಂಚಾರ ಬಂದ್​, ಬದಲಿ ಮಾರ್ಗದ ವ್ಯವಸ್ಥೆ

ಬೆಂಗಳೂರು: ಈದ್–ಮಿಲಾದ್ ಹಬ್ಬದಂದು (ಸೆಪ್ಟೆಂಬರ್‌ 16) ಮೆರವಣಿಗೆಗಳು ನಡೆಯುವುದರಿಂದ ನಗರದ ಹಲವು ರಸ್ತೆಗಳಲ್ಲಿ ಸಂಚಾರ ಪೊಲೀಸರು ವಾಹನ ಸಂಚಾರ ನಿರ್ಬಂಧಿಸಿ, ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಿದ್ದಾರೆ.

ನೃಪತುಂಗ ರಸ್ತೆಯಲ್ಲಿನ ವೈ.ಎಂ.ಸಿ.ಎ ಮೈದಾನದಲ್ಲಿ ಸಾವಿರಾರು ಜನರು ಮೆರವಣಿಗೆ ಮೂಲಕ ನಗರದ ವಿವಿಧ ಸ್ಥಳಗಳಿಂದ ಬಂದು ಸೇರಲಿದ್ದಾರೆ. ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡು ಗಳನ್ನು ಮಾಡಲಾಗಿದೆ.

ಈದ್-ಮಿಲಾದ್ ಮೆರವಣಿಗೆ ಮಾರ್ಗಗಳು:

  • ಜಿ.ಸಿ. ನಗರ ದರ್ಗಾದಿಂದ ಹೊರಟು ಶಿವಾಜಿನಗರ ಕಂಟೋನ್ಮೆಂಟ್‌ ಕಡೆಗೆ ಸಾಗುವುದು
  • ಯಲಹಂಕ ಓಲ್ಡ್ ಟೌನ್ ಮಸೀದಿಯಿಂದ ಯಲಹಂಕ ಓಲ್ಡ್ ಟೌನ್ ಮಸೀದಿಯವರೆಗೆ
  • ‌‌ಹಳೇ ಬಸ್ ನಿಲ್ದಾಣದಿಂದ ಸಣ್ಣ ಅಮಾನಿಕೆರೆವರೆಗೆ
  • ಬೆಳ್ಳಳ್ಳಿ ಕ್ರಾಸ್‌ನಿಂದ ನಾಗವಾರ ಸಿಗ್ನಲ್​ವರೆಗೆ
  • ರಾಜಗೋಪಾಲನಗರ ಮುಖ್ಯರಸ್ತೆ ಯಿಂದ ಪೀಣ್ಯ ಎರಡನೇ ಹಂತದವರೆಗೆ
  • ಸೌತ್ ಎಂಡ್ ಸರ್ಕಲ್‌ನಿಂದ ಆರ್.ವಿ ರಸ್ತೆಯಲ್ಲಿ ಲಾಲ್‌ಬಾಗ್ ವೆಸ್ಟ್ ಗೇಟ್ ಸರ್ಕಲ್​ವರೆಗೆ
  • ಗೀತಾ ಜಂಕ್ಷನ್​ (ಕೂಲ್​​ ಜಾಯಿಂಟ್​ ಜಂಕ್ಷನ್​​)ನಿಂದ ಸೌತ್ ​ಎಂಡ್​ ಸರ್ಕಲ್​
  • ಬೇಂದ್ರೆ ಜಂಕ್ಷನ್‌ನಿಂದ ಓಬಳಪ್ಪ ಗಾರ್ಡನ್ ಜಂಕ್ಷನ್
  • ಮಹಾಲಿಂಗೇಶ್ವರ ಬಡಾವಣೆಯಿಂದ ಆಡುಗೋಡಿ
  • ಈ ಮಾರ್ಗಗಳ ಮೂಲಕ ಎಲ್ಲ ಮೆರವಣಿಗೆಗಳು ವೈ.ಎಂ.ಸಿ.ಎ ಮೈದಾನಕ್ಕೆ ಬರಲಿವೆ.

ಸಂಚಾರ ನಿರ್ಬಂಧಿಸಿರುವ ಮಾರ್ಗಗಳು:

ನೇತಾಜಿ ಜಂಕ್ಷನ್​ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೆ ಸಂಚಾರ ನಿರ್ಬಂಧಿಸಲಾಗುತ್ತದೆ.

ಮಾಸ್ಕ್ ಜಂಕ್ಷನ್‌ನಿಂದ ಎಂ.ಎಂ. ರಸ್ತೆ ಮೂಲಕ ನೇತಾಜಿ ಜಂಕ್ಷನ್​ವರೆಗೆ ಎಂ.ಎಂ.ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಬದಲಾಗಿ ಏಕ ಮುಖ ಸಂಚಾರವನ್ನಾಗಿ ತಾತ್ಕಾಲಿಕವಾಗಿ ಮಾರ್ಪಾಡು ಮಾಡಲಾಗಿದ್ದು, ನೇತಾಜಿ ಜಂಕ್ಷನ್‌ನಿಂದ ಮಾಸ್ಕ್ ಜಂಕ್ಷನ್ ಕಡೆಗೆ ವಾಹನಗಳ ಸಂಚಾರಕ್ಕೆ ಅವಕಾಶವಿದೆ.

ನೇತಾಜಿ ಜಂಕ್ಷನ್ ನಿಂದ ಹೇನ್ಸ್ ಜಂಕ್ಷನ್ ವರೆಗೆ ಹೇನ್ಸ್ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗುತ್ತದೆ.

ನಾಗವಾರ ಜಂಕ್ಷನ್​ನಿಂದ ಪಾಟರಿ ಸರ್ಕಲ್ ರಸ್ತೆಯವರೆಗೆ ಭಾಗಶಃ ಸಂಚಾರ ನಿರ್ಬಂಧಿಸಲಾಗುತ್ತದೆ

ಡಿ.ಜೆ ಬಳಕೆಗೆ ಅವಕಾಶ ಇಲ್ಲ: ದಯಾನಂದ

ಈದ್ ಮಿಲಾದ್ ಅಂಗವಾಗಿ ಸೆ. 16ರಂದು ನಗರದ ವಿವಿಧ ಮೈದಾನಗಳಲ್ಲಿ ಕಾರ್ಯಕ್ರಮಗಳು ಹಾಗೂ ಸ್ತಬ್ಧಚಿತ್ರಗಳ ಮೆರವಣಿಗೆ ಆಯೋಜನೆಯಾಗಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ನೀಡಿದ್ದಾರೆ.

ವೈ.ಎಂ.ಸಿ.ಎ ಮೈದಾನ, ಮಿಲ್ಲರ್ಸ್‌ ರಸ್ತೆ ಖುದ್ದುಸಾಬ್‌ ಈದ್ಗಾ ಮೈದಾನ, ಶಿವಾಜಿನಗರ ಛೋಟಾ ಮೈದಾನ, ಭಾರತೀನಗರ ಸುಲ್ತಾನ್‌ ಜೀ ಗುಂಟಾ ಮೈದಾನ ಹಾಗೂ ಇತರೆಡೆ ಕಾರ್ಯಕ್ರಮಗಳು ನಡೆಯಲಿವೆ.

ಮೆರವಣಿಗೆ ಶಾಂತ ರೀತಿಯಲ್ಲಿ ಸಾಗುವಂತೆ ಸಹಕರಿಸಬೇಕು. ಹರಿತವಾದ ವಸ್ತುಗಳನ್ನು ಹೊಂದಿರಬಾರದು. ಡಿ.ಜೆ. ಬಳಸುವಂತಿಲ್ಲ, ಸ್ತಬ್ಧಚಿತ್ರಗಳು ಪ್ರಚೋದನಾತ್ಮಕ ಅಂಶ ಒಳಗೊಂಡಿರಬಾರದು. ಪೂಜಾ ಸ್ಥಳಗಳು (ದೇವಸ್ಥಾನ/ಚರ್ಚ್​ಗಳ) ಮುಂಭಾಗದಲ್ಲಿ ಘೋಷಣೆ ಕೂಗಬಾರದು.

ಮೆರವಣಿಗೆ ವೇಳೆ ಆಯೋಜಕರು ವಿದ್ಯುತ್ ಸಂಪರ್ಕಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ಬೆಂಕಿ ನಂದಿಸುವ ಸಾಮಗ್ರಿ ಇಟ್ಟುಕೊಂಡಿರಬೇಕು, ರಾತ್ರಿ ಮೆರವಣಿಗೆ ಮುಗಿದ ನಂತರ ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಜನ ಪ್ರಯಾಣಿಸಬಾರದು. ಹಿರಿಯ ನಾಗರಿಕರು, ಶಾಲಾ ಮಕ್ಕಳು ಹಾಗೂ ಇತರರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಕಡಿಮೆ ಪ್ರಮಾಣದ ಶಬ್ದದೊಂದಿಗೆ ಬೆಳಗ್ಗೆ 6ರಿಂದ ರಾತ್ರಿ 10 ರ ವರೆಗೆ ಮಾತ್ರ ಬಳಸಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.

RELATED ARTICLES
- Advertisment -
Google search engine

Most Popular