ಬೆಂಗಳೂರು: ಮೈಸೂರು ದಸರಾ ಉತ್ಸವ ಅದ್ಧೂರಿ ಆಚರಣೆ ಹೆಸರಿನಲ್ಲಿ ಹಗರಣಕ್ಕೆ ವೇದಿಕೆಯಾಗದಿರಲಿ ಎಂಬುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ಸಲಹೆ ಮಾಡಿದ್ದಾರೆ.
ಇಂದು ಬುಧವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ನಾಡಹಬ್ಬ ಮೈಸೂರು ದಸರಾ ಉತ್ಸವವನ್ನ ಅದ್ಧೂರಿಯಾಗಿ ಆಚರಿಸಬೇಕು ಎಂಬ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಅದ್ಧೂರಿ ದಸರಾ, ಕಾಂಗ್ರೆಸ್ ಸರ್ಕಾರದದ ಮತ್ತೊಂದು ಅದ್ಧೂರಿ ಹಗರಣಕ್ಕೆ ವೇದಿಕೆ ಆಗದಿರಲಿ ಎನ್ನುವುದೇ ಕನ್ನಡಿಗರ ಆಶಯವನ್ನು ವ್ಯಕ್ತ ಪಡಿಸಿದ್ದಾರೆ.
ಕಳೆದ ವರ್ಷ ಅಂತರರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಶ್ರೀ ಪಂಡಿತ್ ತಾರಾನಾಥ್ ಅವರ ಬಳಿಯೂ ಪರ್ಸಂಟೇಜ್ ಕಮಿಷನ್ ಕೇಳಿ ಕರ್ನಾಟಕದ ಮಾನ ಹಾರಾಜು ಹಾಕಿದ್ದ ಕಾಂಗ್ರೆಸ್ ಸರ್ಕಾರ, ಈ ವರ್ಷವಾದರೂ ನಾಡಹಬ್ಬ ದಸರಾ ಮಹೋತ್ಸವಕ್ಕೆ ಭ್ರಷ್ಟಾಚಾರದ ಸೋಂಕು ತಗುಲಿಸದೆ ನಾಡಿನ ಸಂಸ್ಕೃತಿ, ಪರಂಪರೆಯ ಗೌರವ ಉಳಿಸುತ್ತೋ ಅಥವಾ ಈ ವರ್ಷವೂ ಮತ್ತೊಂದು ಭ್ರಷ್ಟಾಚಾರದ ಅಂಬಾರಿ ಹೊತ್ತು ಕನ್ನಡಿಗರ ಮಾನ ಕಳಿಯುತ್ತೋ ಕಾದು ನೋಡಬೇಕು ಎಂದಿದ್ದಾರೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂದರೆ ಅದು ಕರ್ನಾಟಕದ ಭವ್ಯ ಸಾಂಸ್ಕೃತಿಕ ಪರಂಪರೆಯ ಪ್ರತೀಕ. ಇಡೀ ದೇಶವೇ, ಪ್ರಪಂಚವೇ ಎದುರು ನೋಡುವ ಇಂತಹ ಉತ್ಸವವನ್ನ ರಾಜ್ಯ ಸರ್ಕಾರ ಅತ್ಯಂತ ಆಸಕ್ತಿ, ಶ್ರದ್ಧೆ, ಭಕ್ತಿಗಳಿಂದ ಆಚರಿಸಬೇಕು. ಇಲ್ಲವಾದರೆ ಈ ಸರ್ಕಾರ ಆ ತಾಯಿ ಚಾಮುಂಡೇಶ್ವರಿಯ ಶಾಪಕ್ಕೆ ಗುರಿಯಾಗುವುದು ನಿಶ್ಚಿತ ಎಂದು ಹೇಳಿದ್ದಾರೆ.