ಮೈಸೂರು: ತಿರುಪತಿ ಪ್ರಸಾದ ಲಡ್ಡು ತಯಾರಿಕೆಗೆ ಪ್ರಾಣಿ ಕೊಬ್ಬನ್ನ ಬಳಸಿದ ವಿಷಯ ಕೇಳಿ ಬಹಳ ಬೇಸರವಾಗಿದೆ ಇದು ಮನುಷ್ಯ ಜಾತಿಗೇ ಅವಮಾನ ಎಂದರೆ ತಪ್ಪಾಗಲಾರದು . ಸನಾತನ ಹಿಂದೂ ಧರ್ಮದ ಪ್ರಸಿದ್ದ ದೇವಾಲಯಕ್ಕೆ ಹೇರಳವಾಗಿ ಕಾಣಿಕೆ ಬರುತ್ತಿದ್ದರೂ ಇಂತಹ ನೀಚ ಕೃತ್ಯ ಮಾಡಿರುವುದು ಅಸಹ್ಯ ಎನಿಸುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷರಾದ ಕೆ ಮಹೇಶ್ ಕಾಮತ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ವರದಿ ನೋಡಿ ಕರ್ನಾಟಕ ಸರ್ಕಾರ ಎಲ್ಲಾ ದೇವಸ್ಥಾನದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಉಪಯೋಗಿಸಬೇಕೆಂದು ಆಜ್ಞೆ ಹೊರಡಿಸಿದೆ. ದಯವಿಟ್ಟು ಎಲ್ಲಾ ದೇವಸ್ಥಾನಕ್ಕೆ ಆರೋಗ್ಯ ಇಲಾಖೆಯವರು ಭೇಟಿ ಕೊಟ್ಟು ಖದ್ದಾಗಿ ಪರಿಶೀಲಿಸಿ ವರದಿಯನ್ನ ಸಾರ್ವಜನಿಕವಾಗಿ ನೀಡಬೇಕು. ಮಾಧ್ಯಮದವರೂ ಸಹ ಇಂತಹ ವಿಷಯವನ್ನ ಗಂಭೀರವಾಗಿ ಪರಿಗಣಿಸಿ ಸರಿಯಾದ ವಿಷಯ ಸಾರ್ವಜನಿಕರಿಗೆ ತಿಳಿಸಲು ಸಹಕರಿಸಬೇಕು ಎಂದು ಹೇಳಿದರು.
ಇಂತಹ ಯಾವುದಾದರೂ ಲೋಪ ಕಂಡುಬಂದರೆ ಈ ಕೂಡಲೇ ದೇವಸ್ಥಾನದ ಆಡಳಿತ ಮಂಡಳಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಒಂದು ಕಾಲದಲ್ಲಿ ನಂದಿನಿ ತುಪ್ಪವೂ ನಕಲಿಯಾಗಿ ಸಿಗುತ್ತಿತ್ತು ಹಾಗೂ ಹಲವು ಕಡೆಯಲ್ಲಿ ಬಹಳಷ್ಟು ಆಹಾರ ಪದಾರ್ಥ, ಹಾಲು ಹಾಗೂ ಇತರ ಪದಾರ್ಥವು ನಕಲಿ ತಯಾರಿಸಿರುತ್ತಿರುವುದನ್ನ ಕೇಳಿರುತ್ತೇವೆ. ಆದ್ದರಿಂದ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಈ ಕೂಡಲೇ ಎಲ್ಲಾ ದೇವಸ್ಥಾನಕ್ಕೆ ಭೇಟಿ ಕೊಟ್ಟು ಸರಿಯಾದ ಮಾಹಿತಿ ಸಂಗ್ರಹಿಸಬೇಕು ಹಾಗೂ ನಕಲಿ ವಸ್ತು ತಯಾರಿಕಾ ಘಟಕದ ಮೇಲೆ ನಿಗಾ ಇರಿಸಿ ಇಂತಹ ಕೃತ್ಯ ಮಾಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಎಲ್ಲಾ ಭಕ್ತರ ಪರವಾಗಿ ವಿನಂತಿಸಿಕೊಳ್ಳುತ್ತೇನೆ ಎಂದಿದ್ದಾರೆ .