ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ನವ ರಾತ್ರಿ ಆರಂಭವಾದ ಹಿನ್ನೆಲೆಯಲ್ಲಿ ಪಟ್ಟಣದ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯದಲ್ಲಿ ದಸರಾ ವಿಶೇಷ ಪೂಜೆ ಆರಂಭಿಸಲಾಗಿದ್ದು ಒಂಭತ್ತು ದಿನಗಳ ಕಾಲ ವಿವಿಧ ಸೇವೆಗಳನ್ನು ಮಾಡಲಾಗುತ್ತಿದೆ.
ಮೊದಲ ದಿನವಾದ ಗುರುವಾರ ಪಟ್ಟಣದ ಮಹಾತ್ಮಗಾಂಧಿ ಉಧ್ಯಾನವನದ ಬಳಿ ಇರುವ ದೇವಾಲಯದಿಂದ ಲಕ್ಷ್ಮೀನಾರಾಯಣ ಸ್ವಾಮಿ ಮತ್ತು ಅರ್ಕೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ
ಸಮೇತ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಭಕ್ತರು ದೇವರಿಗೆ ಹಣ್ಣುಕಾಯಿ ನೀಡಿ ಪೂಜೆ ಸಲ್ಲಿಸಿದರಲ್ಲದೆ ತಮ್ಮ ಇಷ್ಠಾರ್ಥ ಸಿದ್ದಿಗಾಗಿ ಹರಕೆ ಹೊತ್ತುಕೊಂಡರು. ಬಜಾರ್ರಸ್ತೆ, ೭ನೇ ರಸ್ತೆ, ಅರ್ಕನಾಥ ರಸ್ತೆಗಳಲ್ಲಿ ಉತ್ಸವ ಮೂರ್ತಿಗಳನ್ನು ಹೊತ್ತೊಯ್ದು ಮೆರವಣಿಗೆ ಮಾಡಿದ ನಂತರ ದೇವಾಲಯಕ್ಕೆ ಕರೆ ತರಲಾಯಿತು.
ದೇವಾಲಯದ ಅರ್ಚಕ ಶ್ರೀನಿವಾಸ ಭಟ್ ಮಾತನಾಡಿ ದಸರಾ ಹಿನ್ನೆಲೆಯಲ್ಲಿ ಲಕ್ಷ್ಮೀನಾರಾಯಣ ದೇವಾಲಯದಲ್ಲಿ ಒಂಭತ್ತು ದಿನಗಳ ಕಾಲ ಪೂಜೆ, ಭಜನೆ ಮತ್ತು ದೇವರ ಪಾರಾಯಣ ಮಾಡುವುದರ ಜತೆಗೆ ನವ ರಾತ್ರಿ ಬೊಂಬೆಗಳ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು. ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತಲ ಗ್ರಾಮಸ್ಥರು ದಸರಾ ಸಮಯದಲ್ಲಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರ ಜತೆಗೆ ಬೊಂಬೆಗಳ ಪ್ರದರ್ಶನ ವೀಕ್ಷಣೆ ಮಾಡಬಹುದು ಎಂದು ತಿಳಿಸಿದರು.
ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೈ.ಎಸ್.ಕುಮಾರ್ ಮಾತನಾಡಿ ಈ ಬಾರಿ ಅತ್ಯಂತ ವಿಶೇಷವಾಗಿ ದೇವಾಲಯದಲ್ಲಿ ಪೂಜೆ ನಡೆಸಲಿದ್ದು ಜತೆಗೆ ಬೊಂಬೆಗಳ ಪ್ರದರ್ಶನ ಏರ್ಪಡಿಸಿರುವುದರಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದಸರಾ ಪೂಜೆಯಲ್ಲಿ ಸಂಭ್ರಮಿಸಬೇಕೆಂದು ಕೋರಿದರು.