ರಾಮನಗರ: ರಾಜಸ್ಥಾನದ 78 ವರ್ಷದ ಗಣಿ ಉದ್ಯಮಿ ಪಿ.ಬಿ. ಓಸ್ವಾಲ್ ಜೈನ್ ಅವರು ಸಾವಿರಾರು ಕೋಟಿ ರೂ. ಮೌಲ್ಯದ ಸ್ವಯಾರ್ಜಿತ ಆಸ್ತಿಯನ್ನು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಪಾಲನಹಳ್ಳಿಯ ಶ್ರೀ ಶನೈಶ್ಚರ ಮಠಕ್ಕೆ ದಾನ ಮಾಡಿ ಜೈನ ಸನ್ಯಾಸ ದೀಕ್ಷೆ ತೆಗೆದುಕೊಳ್ಳಲು ಹೊರಟಿದ್ದಾರೆ.
ಪಾಲನಹಳ್ಳಿ ಶ್ರೀ ಶನೈಶ್ಚರ ಸ್ವಾಮಿ ಮಠಾಧ್ಯಕ್ಷ ಡಾ. ಸಿದ್ದರಾಜು ಸ್ವಾಮೀಜಿ ಅವರ ಜನೋಪಯೋಗಿ, ಸೇವಾ ಕಾರ್ಯಗಳನ್ನು ಗಮನಿಸಿದ್ದರಿಂದ ಆಸ್ತಿಯನ್ನು ಮಠಕ್ಕೆ ನೀಡಿದ್ದೇನೆ.
ಪಿ.ಬಿ. ಓಸ್ವಾಲ್ ಜೈನ್, ರಾಜಸ್ಥಾನದ ಗಣಿ ಉದ್ಯಮಿ
ಪಾಲನಹಳ್ಳಿ ಮಠಕ್ಕೆ ಸಾವಿರಾರು ಎಕರೆ ಆಸ್ತಿಯ ಒಡೆತನ, ಸಂಪತ್ತು ಸಿಕ್ಕಿರುವುದರಿಂದ ಇನ್ನು ಮುಂದೆ ಪಾಲನಹಳ್ಳಿ ಮಠ ರಾಜ್ಯದಲ್ಲಿಯೇ ಶ್ರೀಮಂತ ಮಠದ ಸ್ಥಾನವನ್ನು ಅಲಂಕರಿಸಲಿದೆ.
ಓಸ್ವಾಲ್ ಜೈನ್ ಅವರು ವಿವಿಧ ಕಂಪೆನಿಗಳು ಹಾಗೂ ಕರ್ನಾಟಕ, ಮುಂಬಯಿ, ತಮಿಳುನಾಡು, ರಾಜಸ್ಥಾನ, ಗುಜರಾತ್, ಆಂಧ್ರಪ್ರದೇಶದಲ್ಲಿಯ ಆಸ್ತಿ ಹಾಗೂ 3 ಸಾವಿರ ಎಕರೆ ಕಲ್ಲಿದ್ದಲು ಭೂಮಿ, ಅದಿರಿನ ಗಣಿಗಳ ಜತೆಗೆ ವಿದೇಶಗಳಲ್ಲಿ ವಹಿವಾಟುಗಳನ್ನು ಡಾ. ಸಿದ್ದರಾಜು ಸ್ವಾಮೀಜಿ ಹೆಸರಿಗೆ ನೋಂದಣಿ ಮಾಡಿಸಿದ್ದು ದಾಖಲೆ ಪತ್ರ ಹಸ್ತಾಂತರಿಸಿದ್ದೇನೆ ಎಂದು ತಿಳಿಸಿದ್ದಾರೆ. ತಮ್ಮ ಇಬ್ಬರು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯನ್ನು ಮಾತ್ರ ನೀಡಿದ್ದಾರೆ.
ಕಾನೂನಾತ್ಮಕವಾಗಿ ಆಸ್ತಿ ಮಠಕ್ಕೆ ವರ್ಗಾವಣೆಯಾದ ಬಳಿಕ ಮಠದ ಆಡಳಿತ ಮಂಡಳಿ, ಆದಾಯ ತೆರಿಗೆ ಆಯುಕ್ತರೊಂದಿಗೆ ಚರ್ಚಿಸಿ ಗಣಿ ವಹಿವಾಟಿನ ಆದಾಯದಿಂದ ಮಠದ ನಿರ್ವಹಣೆ, ಶಾಲೆ, ಕಾಲೇಜು, ಆಸ್ಪತ್ರೆ, ಗೋಶಾಲೆ, ದೇಗುಲ, ಗೋಶಾಲೆ, ಬಡವರಿಗೆ ಮನೆ ನಿರ್ಮಾಣ ಮಾಡಲಾಗುವುದು.
ಡಾ| ಸಿದ್ದರಾಜ ಸ್ವಾಮೀಜಿ, ಪೀಠಾಧ್ಯಕ್ಷರು, ಪಾಲನಹಳ್ಳಿ ಮಠ