ಮೈಸೂರು: ಭಾರತೀಯ ರೈಲ್ವೆ ಇಲಾಖೆಯಲ್ಲಿ ಈ ವರ್ಷ 60 ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವರಾದ ವಿ ಸೋಮಣ್ಣ ತಿಳಿಸಿದರು.
ವಾಕ್ ಮತ್ತು ಶ್ರವಣ ಸಂಸ್ಥೆಯ ವಿಜ್ಞಾನ ಭವನದಲ್ಲಿ ಇಂದು ಆಯೋಜಿಸಿದ್ದ ಸರ್ಕಾರಿ ಉದ್ಯೋಗಗಳಲ್ಲಿ ಆಯ್ಕೆಯಾದ 51000 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ರೋಜಗಾರ್ ಯೋಜನೆಯನ್ನು ಜಾರಿಗೆ ತಂದರು. 2014 ರಿಂದ 12 ಆವೃತ್ತಿಯಲ್ಲಿ ಉದ್ಯೋಗ ಮೇಳವನ್ನು ಮಾಡಿ ಇಲ್ಲಿಯವರೆಗೆ 14 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಇದರಿಂದ ಪ್ರತಿಭಾವಂತರಿಗೆ ಉದೋಗಗಳನ್ನು ನೀಡಲಾಗುತ್ತಿದೆ. ರೈಲ್ವೆ ಇಲಾಖೆಯಲ್ಲಿ 2014 ರಿಂದ ಇಲ್ಲಿಯವರೆಗೆ ಮಿಶನ್ ಮೋಡ್ ನಲ್ಲಿ 5.2 ಲಕ್ಷ ಉದ್ಯೋಗಳನ್ನು ನೀಡಲಾಗಿದೆ ಎಂದರು.
ಅಂಚೆ ಇಲಾಖೆಯಲ್ಲಿ ಹೆಚ್ಚಿನ ನೇಮಕಾತಿಗಳು ನಡೆಯುತ್ತಿವೆ. ಭಾರತದಲ್ಲಿ ಕರ್ನಾಟಕ ಸಾಂಸ್ಕೃತಿಕ ರಾಜ್ಯ, ಕರ್ನಾಟಕದಲ್ಲಿ ಮೈಸೂರು ಸಾಂಸ್ಕೃತಿಕ ರಾಜಧಾನಿ.ಪ್ರಧಾನ ಮಂತ್ರಿ ಜನ ಧನ್ ಯೋಜನೆಯಡಿ ಸೌಲಭ್ಯ, ಆರೋಗ್ಯ ಸೌಲಭ್ಯ ಹೆಚ್ಚಿಸಲು ಆಯುಷ್ಮನ ಭಾರತ್ ಯೋಜನೆ, ಮುದ್ರ ಯೋಜನೆ, ಬೇಟಿ ಬಚಾವ್ ಬೇಟಿ ಪಡವೋ ಯೋಜನೆ, ಮುಂತಾದ ಯೋಜನೆಗಳನ್ನು ಜಾರಿಗೆ ನರೇಂದ್ರ ಮೋದಿಯವರ ಸರ್ಕಾರ ಜಾರಿಗೆ ತಂದು ಅಭಿವೃದ್ದಿ ಮಾಡಿದೆ ಎಂದರು.
ವಾಕ್ ಮತ್ತು ಶ್ರವಣ ಸಂಸ್ಥೆಗೆ 150 ಕೋಟಿ ಅನುಧಾನ ನೀಡಿ ಇದರ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೊಡುಗೆ ನೀಡಿದೆ ಎಂದರು
ದೇಶಕ್ಕೆ ತನ್ನದೇ ಅದ ಪರಂಪರೆ ಇದೆ ಇತಿಹಾಸ ಇದೆ. ಪ್ರತಿಯೊಬ್ಬರೂ ದೇಶ ಪ್ರೇಮವನ್ನು ಬೆಳೆಸಿಕೊಳ್ಳಿ. ಉದೋಗವನ್ನು ಪಡೆದ 51 ಸಾವಿರ ಅಭ್ಯರ್ಥಿಗಳಿಗೆ ಶುಭವಾಗಲಿ. ಮೈಸೂರು ವಿಭಾಗದಲ್ಲಿ 171 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಕೊಡಗು ಮೈಸೂರು ಲೋಕಸಭಾ ಸಂಸದರಾದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ ಕಳೆದ 10 ವರ್ಷಗಳಲ್ಲಿ ಪ್ರಧಾನ ಮಂತ್ರಿ ಗಳು ವಿಕಸಿತ ಭಾರತಕ್ಕೆ ಅಡಿಪಾಯ ಇಟ್ಟಿದ್ದಾರೆ. ವಿಕಸಿತ ಭಾರತ 2047 ಕ್ಕೇ ಅಭಿವೃದ್ದಿ ಗುರಿಯನ್ನು ರೂಪಿಸಿದ್ದಾರೆ. ಸರ್ಕಾರದ ಹಲವು ಇಲಾಖೆಗಳು ದೇಶದ ಅಭಿವೃದ್ದಿ ಹಾಗೂ ಉದ್ಯೋಗ ನೀಡುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿವೆ. ಭಾರತ ಉತ್ತಮ ಭವಿಷ್ಯವನ್ನು ಹೊಂದಿದ್ದು, ವಿಕಸಿತ ಭಾರತದ ಅಬಿವೃದ್ದಿಗೆ ಪ್ರತಿಯೊಬ್ಬರೂ ಕೈಜೋಡಿಸಿ ಎಂದರು.
ಕಾರ್ಯಕ್ರಮದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀವತ್ಸ, ದಕ್ಷಿಣ ಕರ್ನಾಟಕ ವಿಭಾಗದ ಅಂಚೆ ಇಲಾಖೆಯ ನಿರ್ದೇಶಕ ಸಂದೇಶ್ ಮಹದೇವಪ್ಪ, ರೈಲ್ವೆ ಇಲಾಖೆಯ ಡಿ ಆರ್ ಎಂ ಶಿಲ್ಪಿ ಅಗರವಾಲ್, ಐಷ್ ಸಂಸ್ಥೆ ನಿರ್ದೇಶಕಿ. ಡಾ. ಪುಷ್ಪಾವತಿ, ದಕ್ಷಿಣ ಭಾರತದ ಪೋಸ್ಟ್ ಮಾಸ್ಟರ್ ಜನರಲ್ ಮ್ಯಾನೇಜರ್ ಚಂದ್ರಶೇಖರ್ ಕಾಕುಮಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.