ಬೆಂಗಳೂರು: ರೈತರ ಜಮೀನು, ನಾಗರಿಕರ ಜಮೀನನ್ನು ವಕ್ಫ್ಗೆ ಹಸ್ತಾಂತರ ಮಾಡಲಾಗುತ್ತಿದೆ. ನೋಟಿಸ್ ಕೊಡುವ ಮೂಲಕ, ಪಹಣಿ ಮಾಡುವ ಮೂಲಕ ಜನರ, ರೈತರ ಹಕ್ಕು ಮೊಟಕುಗೊಳಿಸುವ ಹುನ್ನಾರ ಮತ್ತು ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರಕಾರದ ಪ್ರಯತ್ನ ಖಂಡನೀಯ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಕ್ಫ್ ಆಸ್ತಿ ಎಂಬ ಗಜೆಟ್ ಪ್ರಕಟಣೆಯನ್ನೂ ರದ್ದು ಪಡಿಸಬೇಕು ಜಮೀರ್ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು. ಜಮೀರ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಇದರ ವಿರುದ್ಧ ರಾಜ್ಯದ ಉದ್ದಗಲದಲ್ಲಿ ನವೆಂಬರ್ ೪ರಂದು ಹೋರಾಟ ನಡೆಯಲಿದೆ. ಸರಕಾರವು ಈ ತಕ್ಷಣ ಎಲ್ಲೆಲ್ಲಿ ಪಹಣಿಯಲ್ಲಿ ವಕ್ಫ್ ಎಂದು ಘೋಷಿಸಿದ್ದಾರೋ ಅದನ್ನೆಲ್ಲ ಸಂಪೂರ್ಣ ಹಿಂದಕ್ಕೆ ಪಡೆಯಬೇಕು. ಕೇವಲ ನೋಟಿಸ್ ಹಿಂಪಡೆದರೆ ಸಾಲದು ಎಂದು ಎಚ್ಚರಿಸಿದರು.
ವಿಜಯಪುರ ಜಿಲ್ಲೆಯಲ್ಲಿ ರೈತರ ಹೆಸರಿನಲ್ಲಿದ್ದ ಪಹಣಿಗಳನ್ನು ವಕ್ಫ್ ಹೆಸರಿಗೆ ಬದಲಿಸಿದ್ದಾರೆ. ಜಮೀರ್ ಅವರ ಮಾತಿನ ಧಾಟಿ, ಹಾವಭಾವಗಳನ್ನು ನೋಡಿದರೆ ಒಂದೇ ಸಾರಿ ನಮ್ಮನ್ನೆಲ್ಲ ನಿರ್ನಾಮ ಮಾಡಿ, ಓಡಿಸಿ ನೆಲಸಮ ಮಾಡುವಂಥ ರೀತಿಯಲ್ಲಿ ಇದೆ. ವಕ್ಫ್ ಆಸ್ತಿ ಎನ್ನಲಾದ ಜಾಗ ಬಳಸುತ್ತಿರುವ ನಮ್ಮನ್ನೆಲ್ಲ ಸೈತಾನರೆಂದು ಹೇಳಿದ್ದಾರೆ ಎಂದು ಟೀಕಿಸಿದರು.