ಬೆಂಗಳೂರು , ಜು.೧೫ : ರಾಜ್ಯದಲ್ಲಿ ಮಳೆಯಾಗದೆ ಅಂತರ್ಜಲ ಕುಸಿಯುತ್ತಿದ್ದು, ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲೂ ನೀರಿನ ಸಮಸ್ಯೆ ಎದುರಾಗಿದ್ದು ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿ ಗುಣಮಟ್ಟದ ನೀರನ್ನು ಕೊಡಬೇಕೆಂದು ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಸರ್ಕಾರವನ್ನು ಒತ್ತಾಯಿಸಿದರು.
ವಿಧಾನಪರಿಷತ್ನಲ್ಲಿ ಚುಕ್ಕೆಗುರುತಿನ ಪ್ರಶ್ನೆ ಮೇಲೆ ಮಾತನಾಡಿದ ಅವರು, ಮನುಷ್ಯನಿಗೆ ಶೇ. ೯೫% ಕಾಯಿಲೆಗಳು ಕುಡಿಯುವ ನೀರಿನಿಂದ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ೬೧೭ ಶುದ್ಧ ನೀರಿನ ಘಟಕ ನಿರ್ಮಿಸಿದ್ದೇವೆ ಎನ್ನುತ್ತಿದೆ. ೨೦೨೨-೨೩ರಲ್ಲಿ ಯಾವುದೇ ಅರ್ಜಿ ಬಂದಿಲ್ಲ ಎನ್ನುತ್ತಿದ್ದೀರಿ. ಶುದ್ಧನೀರಿನ ಘಟಕಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಖಾಸಗಿಯವರ ಸಹಭಾಗಿತ್ವದಲ್ಲಿ ಶುದ್ಧ ನೀರಿನ ಘಟಕಗಳನ್ನು ಏಕೆ ನಿರ್ಮಿಸಬಾರದು ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕಖರ್ಗೆ ಉತ್ತರಿಸಿ ಕಳೆದ ೩ ವರ್ಷಗಳಿಂದ ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೊಡುವುದನ್ನು ನಿಲ್ಲಿಸಿದ್ದೇವೆ. ಆರ್.ಓ. ಪ್ಲಾಂಟಗಳು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಆದ್ದರಿಂದ ವಾಟರ್ ಆಡಿಟ್ ಸಮಿತಿಯನ್ನು ರಚಿಸಿ. ನೀಲಿನಕ್ಷೆ ತಯಾರಿಸಿ ಅಗತ್ಯಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.