ಮೈಸೂರು: ಮುಡಾ ೫೦:೫೦ ಅನುಪಾತ ರದ್ದು ಮಾಡಿ ಎಂದು ನಾನು ಹೇಳಲ್ಲ ಎಂದು ಮುಡಾ ಸಭೆಗೆ ಹೋಗುವ ಮುನ್ನ ಶಾಸಕ ಜಿ.ಟಿ ದೇವೇಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ೫೦:೫೦ ಅನುಪಾತ ರದ್ದು ಮಾಡಿ ಎಂದು ನಾನು ಹೇಳಲ್ಲ. ಆದರೆ ೫೦:೫೦ ಅನುಪಾತದಲ್ಲಿ ಆಗಿರುವ ಅಕ್ರಮ ಸೈಟ್ಗಳನ್ನ ರದ್ದು ಮಾಡಬೇಕು. ಸರ್ಕಾರ ಅಕ್ರಮವಾಗಿ ಪಡೆದಿರುವ ನಿವೇಶನಗಳನ್ನ ವಾಪಸ್ ಪಡೆಯಲಿ ಎಂದು ಹೇಳಿದರು.
ಎಲ್ಲಾ ಜಿಲ್ಲೆಗಳಲ್ಲಿ ಕೂಡ ೫೦:೫೦ ಅನುಪಾತದಡಿ ಭೂಮಿ ನೀಡಲಾಗುತ್ತಿದೆ. ಇಲ್ಲವಾದರೆ ನಾಲ್ಕು ಪಟ್ಟು ಭೂಮಿಯನ್ನು ಕೊಡಬೇಕಾಗುತ್ತದೆ. ಇದರಿಂದ ಪ್ರಾಧಿಕಾರಕ್ಕೆ ಹೆಚ್ಚು ನಷ್ಟ ಆಗುತ್ತದೆ. ಹೀಗಾಗಿ ಎಲ್ಲಾ ಪ್ರಾಧಿಕಾರಿಗಳಲ್ಲಿ ೬೦:೪೦ ಹಾಗೂ ೫೦:೫೦ ಅನುಪಾತ ಇದೆ. ನಿಯಮಾನುಸಾರ ೫೦:೫೦ ಅನುಪಾದಡಿ ಅರ್ಹರಿಗೆ ನಿವೇಶನ ನೀಡಲಿ. ಕಾನೂನುಬಾಹಿರವಾಗಿ ನೀಡಿದ್ದರೆ ಅದನ್ನ ವಾಪಸ್ ಪಡೆದುಕೊಳ್ಳಲಿ ಎಂದರು.
ಮುಡಾದಲ್ಲಿ ಕಳೆದ ಒಂದು ವರ್ಷದಿಂದ ಸಭೆ ನಡೆದಿರಲಿಲ್ಲ. ಹೀಗಾಗಿ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ನನಗೆ ಮುಡಾ ಸಭೆ ನೋಟಿಸ್ ಬಂದಾಗ ಡಿಸಿ ಅವರನ್ನ ಕೇಳಿದ್ದೆ. ಕಳೆದ ಸಭೆಯಲ್ಲಿ ನಡೆಸಲಾಗಿರುವ ವಿಚಾರಗಳ ಬಗ್ಗೆ ಚರ್ಚಿಸಲಾಗುತ್ತದೆ. ಕೆಲವೊಂದು ವಿಷಯಗಳಿಗೆ ಸಭೆಯ ಅನುಮೋದನೆ ಬೇಕಾಗಿದೆ. ಈ ವಿಚಾರಗಳನ್ನಷ್ಟೇ ಚರ್ಚಿಸುತ್ತೇನೆ ಎಂದು ತಿಳಿಸಿದರು