ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ. ಜನರು, ಕಾರ್ಯಕರ್ತರು ಬೆಟ್ಟಿಂಗ್ ಕಟ್ಟಿ ಹಣ ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಯೋಗೇಶ್ವರ್ ಅವರು ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ನ ಡಿ.ಕೆ.ಸುರೇಶ್ ಹೇಳಿದರು.
ನಮಗೆ ಗೆಲ್ಲುವ ವಿಶ್ವಾಸವಿದೆ. ನಮ್ಮಿಂದಾಗಿ ಜನರು ಹಣ ಕಳೆದುಕೊಳ್ಳಬಾರದು ಎಂಬುದು ಯೋಗೇಶ್ವರ್ ಅವರ ಮಾತು ಎಂದರು.
ಎಚ್.ಡಿ.ಕುಮಾರಸ್ವಾಮಿ ಕುರಿತ ಜಮೀರ್ ಅಹಮದ್ ಅವರ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ಅವರಿಬ್ಬರೂ ಸ್ನೇಹಿತರು. ಈ ಹಿಂದೆ ಹಲವು ಬಾರಿ ಹಾಗೆ ಕರೆದುಕೊಂಡಿದ್ದಾರೆ. ಮಾಧ್ಯಮಗಳು ಆಗಲೇ ಆ ಬಗ್ಗೆ ಎಚ್ಚರಿಸಿದ್ದರೆ, ಅವರು ಸರಿಪಡಿಸಿಕೊಳ್ಳುತ್ತಿದ್ದರು. ಆದರೆ ಈಗ ಮತದಾನಕ್ಕೆ ಒಂದೆರಡು ದಿನ ಇರುವಾಗ ಮಾಧ್ಯಮಗಳು ಅದನ್ನು ದೊಡ್ಡದಾಗಿ ಬಿಂಬಿಸಿದವು. ಮಾಧ್ಯಮಗಳಿಗೆ ನಮ್ಮ ಪಕ್ಷದ ಮೇಲೆ ಇಷ್ಟು ಕೋಪವೇಕೆ ಎಂದು ಪ್ರಶ್ನಿಸಿದರು.
ಜಮೀರ್ ಅವರ ಹೇಳಿಕೆಯಿಂದ ಪಕ್ಷಕ್ಕೆ ಧಕ್ಕೆಯಾಗಿದೆಯೋ, ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದರು.
ಚುನಾವಣೆಗಾಗಿ ವಕ್ಫ್ ಗದ್ದಲ
ರೈತರ ಜಮೀನಿನ ಖಾತೆಯನ್ನು ವಕ್ಫ್ಗೆ ಬದಲಾಯಿಸುವುದು 2019 ರಿಂದ ನಡೆಯುತ್ತಿದ್ದರೂ ಉಪಚುನಾವಣೆ ಬಂದಾಗ ಆ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ. ವಿರೋಧ ಪಕ್ಷಗಳನ್ನು ಮಾಧ್ಯಮಗಳು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿವೆ ಎಂದು ಡಿ.ಕೆ.ಸುರೇಶ್ ಹೇಳಿದರು.
ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಹೆಚ್ಚು ಬದಲಾವಣೆ ಆಗಿದ್ದು ೨೦೧೯ರಿಂದ ೨೦೨೨ರ ನಡುವೆ. ಆ ಅವಧಿಯಲ್ಲಿ ಬಿಜೆಪಿ ಸರ್ಕಾರವಿತ್ತು. ಚನ್ನಪಟ್ಟಣದಲ್ಲೂ ೨೦೧೯ರಲ್ಲಿ ಪಹಣಿ ಬದಲಾವಣೆ ಮಾಡಲಾಗಿದೆ. ಆಗ ಚರ್ಚೆಯಲ್ಲಿ ಇಲ್ಲದ ವಿಚಾರ ಈಗ ಬಂದಿದ್ದೇಕೆ ಎಂದು ಪ್ರಶ್ನಿಸಿದರು. ಚುನಾವಣೆ ಬಂದಾಗಲಷ್ಟೇ ಜಾತಿ ಧರ್ಮ ಎಲ್ಲವೂ ಮುನ್ನೆಲೆಗೆ ಬರುತ್ತಿದೆ. ಮತದಾನದ ದಿನ ಮಧ್ಯಾಹ್ನದವರೆಗೂ ಸುದ್ದಿವಾಹಿನಿಗಳು ಅದನ್ನೇ ಚರ್ಚೆ ಮಾಡಿದವು. ಈ ವಿಚಾರದಲ್ಲಿ ವಿರೋಧ ಪಕ್ಷಗಳ ರಾಜಕೀಯಕ್ಕೆ ಮಾಧ್ಯಮಗಳು ಅಸ್ತ್ರವಾಗುತ್ತಿವೆ ಎಂದರು.