ಹೊಸದಿಲ್ಲಿ : ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಭೆ ನಡೆಸಿ ಅಪ್ರಾಪ್ತರು ಸೇರಿದಂತೆ ಬಂಧಿತ ಕಾರ್ಮಿಕರ ಅಂತರರಾಜ್ಯ ಕಳ್ಳಸಾಗಣೆ ಸಮಸ್ಯೆಯನ್ನು ಪರಿಹರಿಸಲು ಪ್ರಸ್ತಾವನೆಯನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಉತ್ತರ ಪ್ರದೇಶದಲ್ಲಿ ಬಿಡುಗಡೆಯಾದ ೫,೨೬೪ ಬಂಧಿತ ಕಾರ್ಮಿಕರಲ್ಲಿ ೧,೧೦೧ ಮಂದಿ ಮಾತ್ರ ತಕ್ಷಣದ ಆರ್ಥಿಕ ನೆರವು ಪಡೆದಿದ್ದಾರೆ ಎಂಬ ಅಂಕಿಅಂಶಗಳನ್ನು ಆತಂಕಕಾರಿ ಎಂದು ಬಣ್ಣಿಸಿದೆ.
ಕಾರ್ಮಿಕರ ಕಳ್ಳ ಸಾಗಾಣಿಕೆ: ಬಂಧಿತ ಕಾರ್ಮಿಕರಾಗಿ ಕಳ್ಳಸಾಗಣೆ ಮಾಡಲಾದ ಜನರ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಮುಂದಿನ ವಿಚಾರಣೆಯನ್ನು ಆರು ವಾರಗಳ ನಂತರ ಸುಪ್ರಿಂಕೋರ್ಟ್ ನಡೆಸಲಿದೆ.
ಕೆಲವು ಪ್ರಕರಣಗಳಲ್ಲಿ ಅಪ್ರಾಪ್ತರನ್ನು ಅವರ ತವರು ರಾಜ್ಯಗಳಿಂದ ಕರೆದೊಯ್ದು ಪಕ್ಕದ ರಾಜ್ಯಗಳಲ್ಲಿ ಬಂಧಿಸಿ ದುಡಿಮೆಗೆ ಬಲವಂತಪಡಿಸಲಾಗಿತ್ತು. ಇದರಲ್ಲಿ ರಕ್ಷಿಸಿಸಲ್ಪಟ್ಟ ಮಕ್ಕಳಿಗೆ ತಕ್ಷಣದ ಆರ್ಥಿಕ ನೆರವು ವಿತರಣೆಯಲ್ಲಿ ಸಮಸ್ಯೆ ಉಂಟಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಕ್ಕಳ ಅಂತರ-ರಾಜ್ಯ ಕಳ್ಳಸಾಗಣೆ ಸಮಸ್ಯೆಯನ್ನು ಒಕ್ಕೂಟ ಸರ್ಕಾರ ಮತ್ತು ಎಲ್ಲಾ ರಾಜ್ಯಗಳು ಏಕೀಕೃತ ರೀತಿಯಲ್ಲಿ ಪರಿಹರಿಸಬೇಕಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಪೀಠ ಹೇಳಿದೆ.
ಆದ್ದರಿಂದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತಮ್ಮ ಸಹವರ್ತಿಗಳೊಂದಿಗೆ ಸಭೆ ನಡೆಸಿ ಸಾಮಾಜಿಕ ಅನಿಷ್ಟವನ್ನು ಪರಿಹರಿಸಲು ಪ್ರಸ್ತಾವನೆಯನ್ನು ರೂಪಿಸುವಂತೆ ನ್ಯಾಯಾಲಯ ಸೂಚಿಸಿದೆ. ರಕ್ಷಿಸಲ್ಪಟ್ಟ ಬಾಲಕಾರ್ಮಿಕರಿಗೆ ತಕ್ಷಣದ ಆರ್ಥಿಕ ನೆರವು ನೀಡುವ ಯೋಜನೆಗೆ ಸಹಾಯ ಮಾಡಲು ಸರಳೀಕೃತ ಕಾರ್ಯವಿಧಾನವನ್ನು ಒಳಗೊಂಡಿರುವ ಪ್ರಸ್ತಾವನೆಯನ್ನು ಬಯಸುತ್ತಿರುವುದಾಗಿ ಪೀಠವು ಹೇಳಿದೆ. ಕಾರ್ಮಿಕರ ಕಳ್ಳ ಸಾಗಾಣಿಕೆ ಪ್ರಕರಣದ ಪ್ರಾಮುಖ್ಯತೆಯನ್ನು ಪರಿಗಣಿಸಿ, ಅಟಾರ್ನಿ ಜನರಲ್ ಅವರ ಸಹಾಯವನ್ನು ಪಡೆಯುವುದು ಸೂಕ್ತವೆಂದು ನಾವು ಕಂಡುಕೊಂಡಿದ್ದೇವೆ.
ಆದ್ದರಿಂದ, ಈ ವಿಷಯದಲ್ಲಿ ನಮಗೆ ಸಹಾಯ ಮಾಡಲು ನಾವು ಅಟಾರ್ನಿ ಜನರಲ್ ಅವರನ್ನು ಕೋರುತ್ತೇವೆ” ಎಂದು ಕೋರ್ಟ್ ಹೇಳಿದೆ. ಕಾರ್ಯವಿಧಾನವನ್ನು ಅಂತಿಮಗೊಳಿಸುವಾಗ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು (ಎನ್ಎಚ್ಆರ್ಸಿ) ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ವಿಚಾರಣೆಯ ಸಂದರ್ಭದಲ್ಲಿ, ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ರಕ್ಷಿಸಲ್ಪಟ್ಟ ಬಂಧಿತ ಕಾರ್ಮಿಕರಿಗೆ ತಕ್ಷಣದ ಆರ್ಥಿಕ ಸಹಾಯವನ್ನು ವಿತರಿಸುವ ಸಮಸ್ಯೆಯನ್ನು ಸುಪ್ರೀಂಕೋರ್ಟ್ ಗಮನಕ್ಕೆ ತಂದರು. ಉತ್ತರ ಪ್ರದೇಶದ ಅಂಕಿಅಂಶಗಳನ್ನು ಉಲ್ಲೇಖಿಸಿದ ಪೀಠವು, ಬಿಡುಗಡೆಯಾದ ೪,೧೦೦ ಕ್ಕೂ ಹೆಚ್ಚು ಬಂಧಿತ ಕಾರ್ಮಿಕರಿಗೆ ಹಣಕಾಸಿನ ನೆರವು ಸಿಕ್ಕಿಲ್ಲ ಎಂದು ಹೇಳಿದೆ.