ಮೈಸೂರು:ರಾಜ್ಯದಲ್ಲಿ ಈಗಾಗಲೇ ೬೫ ವೈದ್ಯಕೀಯ ಕಾಲೇಜುಗಳಿದ್ದು, ಮತ್ತೆ ಹೊಸ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸುವ ಬದಲು ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೆಶಕ ಪದ್ಮಶ್ರೀ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.
ಮೈಸೂರು ನಗರದ ವೀಣೆಶೇಷಣ್ಣ ಭವನದಲ್ಲಿ ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಈಗಾಗಲೇ ೭೦೦ ವೈದ್ಯಕೀಯ ಕಾಲೇಜುಗಳಿವೆ. ಪ್ರತಿವರ್ಷ ೧ ಲಕ್ಷ ಎಂಬಿಬಿಎಸ್ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಹೀಗೆ ಮುಂದುವರಿದರೆ ೨೦೩೦ಕ್ಕೆ ಕೆಲವು ವೈದ್ಯಕೀಯ ಕಾಲೇಜುಗಳು ಮುಚ್ಚಿ ಹೋಗುವ ಸಾಧ್ಯತೆಯೂ ಇದೆ ಎಂದು ಹೇಳಿದರು. ದಕ್ಷಿಣ ಭಾರತದಲ್ಲಿ ಶೇ. ೪೦ ಜನಸಂಖ್ಯೆ ಇದ್ದರೆ, ಶೇ. ೬೦ ಕಾಲೇಜುಗಳಿವೆ. ಉತ್ತರ ಭಾರತದಲ್ಲಿ ಶೇ. ೬೦ ಜನಸಂಖ್ಯೆಗೆ ಶೇ. ೪೦ ರಷ್ಟು ಕಾಲೇಜುಗಳಿವೆ. ನಮಗೆ ವೈದ್ಯರ ಸಂಖ್ಯೆ ಮುಖ್ಯವಲ್ಲ. ಗುಣಮಟ್ಟದ ವೈದ್ಯರನ್ನು ತಯಾರು ಮಾಡುವ ವೈದ್ಯಕೀಯ ಸಂಸ್ಥೆಯ ಅಗತ್ಯವಿದೆ. ವೈದ್ಯರೂ ಇಂದು ಆತಂಕದಲ್ಲಿ ಕೆಲಸ ಮಾಡುವಂತಾಗಿದೆ. ಜನರ ನಿರೀಕ್ಷೆ ಹೆಚ್ಚಾಗಿದೆ. ಸತ್ತವರನ್ನು ಬದುಕಿಸಿ ಎಂದು ಒತ್ತಡ ಹೇರುತ್ತಿದ್ದಾರೆ ಎಂದು ಅವರು ವೈದ್ಯರು ಜಾದೂಗಾರರಲ್ಲ, ದೇವರೂ ಅಲ್ಲ, ವೈದ್ಯರು ಹೆಚ್ಚು ಕಾಳಜಿ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ವಿವಿ ಕುಲಪತಿ ಡಾ. ಎಂ.ಎ. ಶೇಖರ್, ಮೈಸೂರು ವೈದ್ಯಕೀಯ ಕಾಲೇಜಿನ ನಿರ್ದೇಶಕರಾದ ಡಾ. ಕೆ.ಆರ್. ದಾಕ್ಷಾಯಿಣಿ, ಉದರರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ. ರಾಮಕೃಷ್ಣ, ಎಚ್.ಡಿ. ಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಚ್.ಎಂ. ಚಂದ್ರಕಲಾ, ಮೈಸೂರು ಸರ್ಕಾರಿ ಆಯುರ್ವೇದ ಸಂಶೋದನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಬಿ. ಲಕ್ಷ್ಮಿನಾರಾಯಣ ಶೆಣೈ, ಮೈಸೂರು ಜಯದೇವ ಹೃದ್ರೋಗ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಅರ್ಪಿತಾ ಅರಸ್ ರವರುಗಳಿಗೆ ‘ವೈದ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳು, ವಿಧಾನ ಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ, ಮೈಸೂರು ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ, ಮೈಸೂರು ವಿವಿ ವಿಶ್ರಾಂತ ಕುಲಪತಿ ಡಾ. ಜಿ. ಹೇಮಂತಕುಮಾರ್, ಅನ್ವೇಷಣಾ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಎಂ.ಜಿ.ಆರ್. ಅರಸ್, ಉಪಾಧ್ಯಕ್ಷ ಎಚ್.ಎಂ.ಟಿ. ಲಿಂಗರಾಜೇ ಅರಸ್, ಭಾಸ್ಕರ್ ಇದ್ದರು.