ಯಳಂದೂರು : ಸಮೀಪದ ಸಂತೆಮರಹಳ್ಳಿ ಹಾಗೂ ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಬುಧವಾರ ಕ್ರೈಸ್ತರ ಪವಿತ್ರ ಹಬ್ಬವಾಗಿರುವ ಕ್ರಿಸ್ಮಸ್ ಹಬ್ಬವನ್ನು ಬುಧವಾರ ಕ್ರಿಶ್ಚಿಯನ್ನರು ಸಂಭ್ರಮ ಸಡಗರಗಳಿಂದ ಆಚರಿಸಿದರು.
ಯಳಂದೂರು ಪಟ್ಟಣ ಸೇರಿದಂತೆ ಚಾಮರಾಜನಗರ ತಾಲೂಕಿನ ಸಂತೆಮರಹಳ್ಳಿ ಹೋಬಳಿಯ ದೇಶವಳ್ಳಿ, ನಾಗವಳ್ಳಿ, ಮಂಗಲ ಗ್ರಾಮಗಳಲ್ಲಿರುವ ಚರ್ಚ್ಗಳಲ್ಲಿ ಕ್ರಿಸ್ಮಸ್ ಸಂಭ್ರಮ ಮುಗಿಲುಮುಟ್ಟಿತ್ತು. ಇದಕ್ಕಾಗಿ ಚರ್ಚ್ಗಳನ್ನು ವಿಶೇಷವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಿಗ್ಗೆ ವಿಶೇಷ ಪ್ರಾರ್ಥನೆಗಳು ನಡೆಯಿತು. ಕ್ರಿಸ್ಮಸ್ ಹಬ್ಬದ ಸಡಗರದಲ್ಲಿ ನವವಸ್ತ್ರಗಳನ್ನು ಧರಿಸಿ ಪ್ರಾರ್ಥನೆಗೆ ವಿಶೇಷವಾಗಿ ಆಗಮಿಸಿದ್ದರು. ಕೆಲವು ಚರ್ಚ್ಗಳಲ್ಲಿ ಯೇಸು ಕ್ರಿಸ್ತನ ಹುಟ್ಟಿನ ದಿನವನ್ನು ನೆನಪಿಸುವ ಗೋದಳಿಗಳನ್ನು ನಿರ್ಮಿಸುವ ಮೂಲಕ ಕ್ರಿಸ್ತನ ಹುಟ್ಟಿನ ಸಂಭ್ರಮವನ್ನು ಮತ್ತೆ ನೆನಪಿಸುವಂತಿತ್ತು.
ಕ್ರಿಸ್ಮಸ್ ಹಬ್ಬದ ನಿಮಿತ್ತ ಪಟ್ಟಣ ಸೇರಿದಂತೆ ಅನೇಕ ಕಡೆ ಕೇಕ್ಗಳ ಮಾರಾಟವೂ ಜೋರಾಗಿತ್ತು. ಕ್ರಿಶ್ಚಿಯನ್ನರು ತಮ್ಮ ಮನೆಗಳ ಮುಂದೆ ಕ್ರಿಸ್ಮಸ್ ಟ್ರೀ, ನಿರ್ಮಿಸಿ ಅದಕ್ಕೆ ಸ್ಟಾರ್, ಗಂಟೆಗಳನ್ನು ಕಟ್ಟಿ ವಿಶೇಷ ಅಲಂಕಾರ ಮಾಡಿದ್ದರು. ಕೆಲವರು ಸಾಂತಾಕ್ಲಾಸ್ನ ವೇಷಭೂಷಣಗಳೊಂದಿಗೆ ಮಕ್ಕಳಿಗೆ ಉಡುಗೊರೆಗಳು, ಚಾಕ್ಲೆಟ್ ಹಾಗೂ ಇತರೆ ಸಿಹಿ ತಿನಿಸುಗಳನ್ನು ನೀಡಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು. ಇದಕ್ಕಾಗಿ ಚರ್ಚ್ಗಳನ್ನು ವಿಶೇಷ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಸಮೀಪದ ದೇಶವಳ್ಳಿ ಗ್ರಾಮದ ಸಿಎಸ್ಐ ಸುಶಾಂತಿ ಚರ್ಚ್ನಲ್ಲಿ ಫಾದರ್ ರೆವೆರಂಡ್ಪುಟ್ಟರಾಜು ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಅಲ್ಲದೆ ಮಕ್ಕಳಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಆಟೋಟಗಳ ಸ್ಪರ್ಧೆಯನ್ನು ಆಯೋಜಿಸಿ ಗೆದ್ದವರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಗ್ರಾಪಂ ಸದಸ್ಯ ಎಚ್.ಎನ್. ಶಿವಕುಮಾರ್, ಡಿ.ಸಿ. ಸುರೇಂದ್ರ, ಶಿವಮಲ್ಲು, ಡಿ.ಸಿ. ಆನಂದ, ಜೇಮ್ಸ್, ಸುರೇಶ್, ಡಾ. ಸುಪ್ರಿಯಾ, ರಾಣಿ ಸತ್ಯಪ್ರಕಾಶ್ ಸೇರಿದಂತೆ ಅನೇಕರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಭಕ್ತಿ ಮೆರೆದರು.