ಬೆಂಗಳೂರು: ಸುಮಾರು 2 ದಶಕಗಳ ಹಿಂದೆ ಪೊಲೀಸರ ಗುಂಡಿಗೆ ಬಲಿಯಾಗಿದ್ದ ಕಾಡುಗಳ್ಳ ವೀರಪ್ಪನ್ ಓಡಾಡಿದ್ದ ಕಾಡಿನಲ್ಲಿ ಸಫಾರಿ ಆರಂಭಿಸುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಇದೀಗ ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.
ಶೀಘ್ರದಲ್ಲೇ ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಹೊಗೇನಕಲ್ ಜಲಪಾತದಿಂದ ಸಫಾರಿ ಆರಂಭಿಸಲು ರಾಜ್ಯ ಅರಣ್ಯ ಇಲಾಖೆ ಮುಂದಾಗಿದೆ. ವೀರಪ್ಪನ್ನ ಹುಟ್ಟೂರಾದ ಗೋಪಿನಾಥoನಿಂದ ಆರಂಭಿಸಿರುವ ಸಫಾರಿಗೆ ಪ್ರವಾಸಿಗರಿಂದ ಹೆಚ್ಚಿನ ಬೇಡಿಕೆ ಇರುವುದನ್ನು ಗಮನಿಸಿ ಕರ್ನಾಟಕ ಅರಣ್ಯ ಇಲಾಖೆ ಸಹ ಹೊಗೇನಕಲ್ನಲ್ಲಿ ಸಫಾರಿ ಆರಂಭಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಈ ಸಫಾರಿಯು 22 ಕಿಲೋಮೀಟರ್ ಅರಣ್ಯ ವ್ಯಾಪ್ತಿಯನ್ನು ಒಳಗೊಂಡಿರಲಿದೆ. ವಿಶೇಷವಾಗಿ, ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿನ ವೀರಪ್ಪನ್ ಅಡಗುತಾಣಗಳನ್ನು ಒಳಗೊಂಡಿರಲಿವೆ. ಈ ಪ್ರದೇಶವು ಆನೆಗಳು, ಜಿಂಕೆಗಳು, ಕರಡಿಗಳು ಮತ್ತು ಇತರ ವನ್ಯಜೀವಿಗಳ ಹೆಚ್ಚಿನ ಇರುವಿಕೆಯನ್ನು ಹೊಂದಿವೆ . ಹೊಗೇನಕಲ್ ಗಡಿಯ ಎರಡೂ ಬದಿಗಳಲ್ಲಿ ಪ್ರವಾಸಿಗರ ನೆಚ್ಚಿನ ತಾಣವಾದ ಹಿನ್ನೆಲೆ ಹೊಗೇನಕಲ್ನಿಂದಲೇ ಸಫಾರಿಯನ್ನು ಪ್ರಾರಂಭಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ವಿಶೇಷವಾಗಿ ಕಾವೇರಿ ನದಿಯಲ್ಲಿ ದೋಣಿ ವಿಹಾರ ಮತ್ತು ಮೀನಿನ ಸಾಂಪ್ರದಾಯಿಕ ಭಕ್ಷ್ಯಗಳಿಂದ ಪ್ರಸಿದ್ಧವಾಗಿರುವುದರರಿಂದ ಈ ಭಾಗದಲ್ಲಿ ಆರಂಭಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬುದು ಎಂಬುದು ಅಧಿಕಾರಿಗಳ ಯೋಚನೆಯಾಗಿದೆ.
ಅರಣ್ಯ ಇಲಾಖೆಯು ಬೆಳಿಗ್ಗೆ ಎರಡು ಮತ್ತು ಸಂಜೆ ಎರಡರಂತೆ ನಾಲ್ಕು ಟ್ರಿಪ್ಗಳ ಸಫಾರಿಗೆ ಚಿಂತನೆ ನಡೆಸಿದೆ. 25 ಮಂದಿಯನ್ನು ಸಾಗಿಸುವ ಸಾಮರ್ಥ್ಯವುಳ್ಳ 2 ವಾಹನಗಳನ್ನು ಬಳಸಿಕೊಳ್ಳಲು ಉದ್ದೇಶಿಸಿದೆ. ದಟ್ಟಾರಣ್ಯದಲ್ಲಿ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆದೊಯ್ಯಬಲ್ಲ ಹೊಸ ಸಫಾರಿ ವಾಹನಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಆರ್ಡರ್ ಮಾಡಿದ್ದಾರೆ ಎಂದು ಹೇಳಲಾಗಿದೆ.