ಮೈಸೂರು : ಮುಡಾದಲ್ಲಿ ನಿವೇಶನ ಕೊಡಿಸುವುದಾಗಿ ಮಹಿಳೆಗೆ ಆಮಿಷ ತೋರಿಸಿ ೩೦ ಲಕ್ಷ ವಂಚಿಸಿದ ಪ್ರಕರಣ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಣ ವಾಪಸ್ ಕೊಡುವಂತೆ ಕೇಳಿದ ಮಹಿಳೆ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ. ವಂಚನೆ ಮಾಡಿ ಹಲ್ಲೆ ನಡೆಸಿದ ಮೂವರ ವಿರುದ್ದ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹಿಳೆ ಪ್ರಕರಣ ದಾಖಲಿಸಿದ್ದಾರೆ. ಲಲಿತಾದ್ರಿಪುರ ಗ್ರಾಮದ ಮನಿಷಾ ಎಂಬ ಮಹಿಳೆ ವಂಚನೆಗೆ ಒಳಗಾದವರು. ಆಲನಹಳ್ಳಿ ಗ್ರಾಮದ ಪವಿತ್ರಾ ಹಾಗೂ ವಿಶ್ವನಾಥ್ ಶೆಟ್ಟಿ ಮತ್ತು ಪವಿತ್ರಾ ಪುತ್ರನ ವಿರುದ್ದ ಮನಿಷಾ ಪ್ರಕರಣ ದಾಖಲಿಸಿದ್ದಾರೆ.
ಒಂದು ವರ್ಷದ ಹಿಂದೆ ಮುಡಾದಲ್ಲಿ ನಿವೇಶನ ಕೊಡಿಸುವುದಾಗಿ ನಂಬಿಸಿ ಪವಿತ್ರ ಹಾಗೂ ವಿಶ್ವನಾಥ ಶೆಟ್ಟಿ ಮನಿಷಾರಿಂದ ೩೦ ಲಕ್ಷ ಪಡೆದಿದ್ದರು. ತಿಂಗಳುಗಳೆ ಉರುಳಿದರೂ ನಿವೇಶನವೂ ಇಲ್ಲ ಹಣವೂ ಇಲ್ಲ. ತಾವು ವಂಚನೆಗೆ ಒಳಗಾಗಿರುವುದು ಖಚಿತವಾಗಿ ಮನಿಷಾ ರವರು ಹಣ ಹಿಂದಿರುಗಿಸುವಂತೆ ಒತ್ತಡ ಹೇರಿದ್ದಾರೆ. ಹಣ ನೀಡುವುದಾಗಿ ಮನೆ ಬಳಿ ಕರೆಸಿಕೊಂಡ ಪವಿತ್ರಾ ತನ್ನ ಮಗ ಹಾಗೂ ವಿಶ್ವನಾಥಶೆಟ್ಟಿ ಕುಮ್ಮಕ್ಕಿನಿಂದ ಮನಿಷಾ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಭಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ದ ಎಫ್ಐಆರ್ ದಾಖಲಾಗಿದೆ.