ಯುವಕನೋರ್ವನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಣೆ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕ್ಷೇತ್ರದ ವ್ಯಾಪ್ತಿಯಲ್ಲಿರುವ ನೊಂದವರು ಮತ್ತು ತುಳಿತಕ್ಕೊಳಗಾದವರ ಪರವಾಗಿ ನಾನು ಸದಾ ಕೆಲಸ ಮಾಡುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳೆದ ಆರು ತಿಂಗಳ ಹಿಂದೆ ಚಂದಗಾಲು ಗ್ರಾಮದಲ್ಲಿ ಯುವಕನೋರ್ವನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಕುಟುಂಬದವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕೊಡಮಾಡಿದ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.
ಇಂತಹ ಘಟನೆ ನಡೆಯಬಾರದಿತ್ತು ನಾಗರೀಕರ ಸಮಾಜ ತಲೆ ತಗ್ಗಿಸುವ ಪ್ರಕರಣಗಳು ನಡೆದಾಗ ನೊಂದ ಕುಟುಂಬದ ಹಿಂದೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕಾದದ್ದು ಸರ್ವರ ಕರ್ತವ್ಯವಾಗಿದ್ದು ಮುಂದೆ ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಒದಗಿಸುವ ಭರವಸೆ ನೀಡಿದರು.
ಮುಖ್ಯಮಂತ್ರಿ ಗಳ ಪರಿಹಾರ ನಿಧಿಯಿಂದ ದೊರೆತಿರುವ ಹಣವನ್ನು ನೊಂದ ಕುಟುಂಬದ ವರು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ಅಧಿಕಾರಿಗಳು ಇವರ ಕುಟುಂಬಗಳಿಗೆ ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಬೇಕು ಎಂದು ಸೂಚಿಸಿದರು.
ಈ ಸಂರ್ದಭದಲ್ಲಿ ನಿಶ್ಚಿತ ಮತ್ತು ವಿನೂತ್ ಹಾಗೂ ಗೌರಮ್ಮನವರ ಕುಟುಂಬಗಳಿಗೆ ತಲಾ ಐದು ಲಕ್ಷ ರೂಗಳ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯ ಚೆಕ್ ಗಳನ್ನು ಶಾಸಕರು ವಿತರಣೆ ಮಾಡಿದರು. ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಮಾತನಾಡಿದರು.
ಗ್ರೇಡ್ 2 ತಹಸೀಲ್ದಾರ್ ಚಂದ್ರಶೇಖರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಮುಂಖಡರಾದ ಕಲ್ಲಹಳ್ಳಿಶ್ರಿನಿವಾಸ್, ಅಪ್ಪಾಜಿಗೌಡ, ಶಂಕರ್, ನಿಶಾಂತ್, ಕೆಂಚಿಮಂಜು, ಡಿ.ಸಿ.ರವಿ, ಗೌತಮ್ ಜಾಧವ್, ಮಹದೇವಸ್ವಾಮಿ, ದಿನೇಶ್ ಮತ್ತಿತರರು ಇದ್ದರು.