ಮೈಸೂರು: ಆರ್ಥಿಕ ಪರಿವರ್ತನೆಯ ಜತೆಗೆ ಪರಿಸರದ ಸಮತೋಲನ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಈಗ ಹೆಚ್ಚಾಗಿದೆ ಎಂದು ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಹೇಳಿದರು.
ಮೈಸೂರಿನ ಒಳಗೊಳ್ಳುವಿಕೆ ಬೆಳವಣಿಗೆ ಮತ್ತು ಅಭಿವೃದ್ಧಿ ಸಂಶೋಧನೆ ಕೇಂದ್ರ ಟ್ರಸ್ಟ್ ಹಾಗೂ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್ ಬಸುದೇವ ಸೋಮಾನಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಜಂಟಿ ಆಶ್ರಯದಲ್ಲಿ ಆತ್ಮ ನಿರ್ಭರ ಭಾರತ: ಭಾರತದ ಆದಿವಾಸಿಗಳ ಜನಾಂಗೀಯ, ಪರಿಸರ ಮತ್ತು ಆರ್ಥಿಕ ಪರಿವರ್ತನೆ ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಆದಿವಾಸಿಗಳ ಪರಿಸರ ಮತ್ತು ಆರ್ಥಿಕ ಪರಿವರ್ತನೆ ಏಕ ಮುಖವಾಗುವುದಕ್ಕಿಂತ ಅದು ಎಲ್ಲರನ್ನೂ ಒಳಗೊಳ್ಳುವ ಕ್ರಿಯೆಯಾಗಿ ರೂಪುಗೊಳ್ಳಬೇಕಾಗಿದೆ. ಪರಿಸರದ ವೈವಿಧ್ಯತೆ ಇರುವಂತೆ ಸಾಂಸ್ಕೃತಿಕ ವೈವಿದ್ಯತೆಯೂ ಇರಬೇಕು ಎಂದು ಅವರು ಪ್ರತಿಪಾದಿಸಿದರು. ಆದಿವಾಸಿ ಆಚರಣೆಗಳು ಕಾಲದ ಮಿತಿಗಳನ್ನು ದಾಟಿ ಮುಂದಿನ ತಲೆಮಾರಿಗೆ ತಲುಪಬೇಕಾದರೆ ಇಂಥ ವಿಚಾರ ಸಂಕಿರಣಗಳು ಅಗತ್ಯ. ಎರಡುದಿನ ಇದರ ಉದ್ದೇಶಗಳು ಈಡೇರಲಿ ಎಂದು ಆಶಿಸಿದರು.ಹುಣಸೂರು ಡೀಡ್ ಸಂಸ್ಥೆಯ ನಿರ್ದೇಸಕ ಡಾ.ಎಸ್.ಶ್ರೀಕಾಂತ್ ಪ್ರಧಾನ ಭಾಷಣ ಮಾಡಿ, ಪ್ರಕೃತಿಯೊಂದಿಗೆ ಮನುಷ್ಯ ಸಂಬಂಧಗಳು ಬೆಸೆದುಕೊಂಡಿವೆ ಅವನ್ನು ಅರಿಯಬೇಕಾದರೆ ಇಂಥ ವಿಚಾರ ಸಂಕಿರಣಗಳು ಅಗತ್ಯ ಎಂದರು.
ಇದೇ ಸಂದಂಭದಲ್ಲಿ ದಿ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಪುಟ್ಟಸಾಮಿ ಅವರು ಮೈಸೂರು ವಿವಿ ಸಿಎಸ್ಎಸ್ ಇಐಪಿ ಸಂಶೋಧನಾ ಕೇಂದ್ರದ ಡಾ.ಡಿ.ಸಿ.ನಂಜುಂಡ, ಅವರ ಪ್ರಾಕ್ಸಿ ಕೃತಿಯ ಎರಡನೇ ಆವೃತ್ತಿಯನ್ನು ಬಿಡುಗಡೆ ಮಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಮಹದೇವಸಾಮಿ, ಟ್ರಸ್ಟ್ ಕಾರ್ಯದರ್ಶಿ ಕುಬೇರ್ ಪಿ.ಗೌಡ, ವ್ಯವಸ್ಥಾಪಕ ಟ್ರಸ್ಟಿ ಎಸ್.ಪ್ರಭಾ ಪತ್ರಕರ್ತ ವೀರಭದ್ರಪ್ಪ ಬಿಸ್ಲಳ್ಳಿ, ಮೈಸೂರು ವಿವಿ ಸಿಎಸ್ಎಸ್ ಇಐಪಿ ಸಂಶೋಧನಾ ಕೇಂದ್ರದ ಡಾ.ಡಿ.ಸಿ.ನಂಜುಂಡ, ಕಾಲೇಜಿನ ಪ್ರಾಧ್ಯಾಪಕ ಡಾ.ಟಿ.ರಮೇಶ್ ಉಪಸ್ಥಿತರಿದ್ದರು.