ಬೆಂಗಳೂರು: ಕಸಗುಡಿಸುವ ಅಥವಾ ಸ್ವಚ್ಛತಾ ಕಾರ್ಯ ಮಾಡುವವರನ್ನು “ಜಾಡಮಾಲಿ’ ಎಂದು ಕರೆಯುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಅವರನ್ನು ಗೌರವಯುತ ಹೆಸರಿನಿಂದ ಕರೆಯಬೇಕು ಎಂದು ಆದೇಶಿಸಿದೆ.
ಹಲವು ವರ್ಷಗಳಿಂದ ಅರೆಕಾಲಿಕವಾಗಿ ಜಾಡಮಾಲಿ (ಸ್ವೀಪರ್) ಕೆಲಸ ಮಾಡುತ್ತಿರುವ ತಮ್ಮ ಸೇವೆಯನ್ನು ಖಾಯಂಗೊಳಿಸಬೇಕು ಹಾಗೂ ಸಂಬಂಧಿಸಿತ ಸೇವಾ ಸೌಲಭ್ಯಗಳನ್ನು ಬಿಡುಗಡೆಗೊಳಿಸುವಂತೆ ಎಂದು ಕೋರಿ ಕೋಲಾರ ಜಿಲ್ಲಾ ಪೊಲೀಸ್ ಮೀಸಲು ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಮೇಶ್ ಬಾಬು ಸೇರಿ ರಾಜ್ಯದ ವಿವಿಧ ಜಿಲ್ಲಾ ಶಸಸ್ತ್ರ ಮೀಸಲು ಠಾಣೆಗಳಲ್ಲಿನ 31 ಮಂದಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾ| ರಾಮಚಂದ್ರ ಡಿ. ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿಯಲ್ಲಿನ ಪುಟಗಳಲ್ಲಿ ಜಾಡಮಾಲಿ ಇರುವುದನ್ನು ಗಮನಿಸಿದ ನ್ಯಾಯಪೀಠ ಇದೊಂದು ಬೇಸರ ಸಂಗತಿ. ತಮ್ಮ ಅಮೂಲ್ಯವಾದ ಸೇವೆಯಿಂದ ನಗರ ಮತ್ತು ಪಟ್ಟಣಗಳನ್ನು ಸ್ವತ್ಛವಾಗಿಸುವ ಇವರನ್ನು ಅಂತಹ ಅಗೌರವ ಮತ್ತು ತುತ್ಛ ಹೆಸರುಗಳಿಂದ ಕರೆಯಬಾರದು. ಜಾಡಮಾಲಿ ಬದಲಿಗೆ “ಸ್ವಚ್ಛತಾ ಸಹಾಯಕರು’ ಎಂಬಂತಹ ಗೌರವ ಸೂಚಕ ಪದನಾಮಗಳಿಂದ ಅವರನ್ನು ಕರೆಯಬೇಕು ಎಂದು ಆದೇಶಿಸಿತು. ಅದಕ್ಕೆ ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಹೆಚ್ಚುವರಿ ಅಡ್ವೋಕೇಟ್ ಜನರಲ್ ಎಸ್.ಎ. ಅಹ್ಮದ್ ನ್ಯಾಯಾಲಯಕ್ಕೆ ಭರವಸೆ ನೀಡಿದರು.