ಮಂಗಳೂರು (ದಕ್ಷಿಣ ಕನ್ನಡ): ಈಗಾಗಲೇ ಹಲವು ಹಗರಣಗಳಿಗೆ ತುತ್ತಾಗಿರುವ ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಉಚ್ಚತ್ತರ್ ಶಿಕ್ಷಾ ಅಭಿಯಾನ (ರೂಸ 1)ರ ಮೂಲಕ ಬಿಡುಗಡೆಯಾದ ಹಣದಲ್ಲಿಯೂ ಭ್ರಷ್ಟಾಚಾರ ಆಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪಾರದರ್ಶಕ ತನಿಖೆ ಆಗಬೇಕು ಹಾಗೂ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು ಎಂದು ಎಬಿವಿಪಿ ಆಗ್ರಹಿಸಿದೆ.
ಮಂಗಳೂರು ನಗರದ ಪ್ರೆಸ್ಕ್ಲಬ್ನಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ಸುವಿತ್ ಶೆಟ್ಟಿ, 2013 ಮತ್ತು 2017ರವರೆಗೆ ರೂಸಾ 1ರ ಮೂಲಕ ಬಿಡುಗಡೆಯಾದ 20 ಕೋಟಿ ರೂ. ಹಣದಲ್ಲಿ ಸುಮಾರು 7 ಕೋಟಿ ರೂ. ಬಾಲಕರ ಮತ್ತು ಬಾಲಕಿಯರ ಪ್ರತ್ಯೇಕ ವಸತಿ ನಿಲಯವನ್ನು ನಿರ್ಮಾಣ ಮಾಡಲಾಗಿದೆ ಎಂಬ ಸುಳ್ಳು ದಾಖಲೆಯನ್ನು ಮಂಗಳೂರು ವಿವಿ ಆಡಳಿತ ಮಂಡಳಿ ನೀಡಿದೆ. ಪರಿಶೀಲನೆಗೆ ಬಂದ ತಜ್ಞರ ಸಮಿತಿ ಮಂಗಳೂರು ವಿವಿಯಲ್ಲಿ ಯಾವುದೇ ಹೊಸ ಹಾಸ್ಟೆಲ್ ನಿರ್ಮಾಣ ಆಗದೆ ಇರುವುದನ್ನು ಕಂಡು ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ವರದಿ ನೀಡಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಉತ್ತರಿಸುವಂತೆ ಮಂಗಳೂರು ವಿವಿ ಆಡಳಿತ ಮಂಡಳಿಯ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿಯಿಂದ ಸಮನ್ಸ್ ನೀಡಲಾಗಿದೆ ಎಂಬುದು ತಿಳಿದು ಬಂದಿದೆ. ಇದು ಮಂಗಳೂರು ವಿವಿಯ ಗೌರವವನ್ನು ಕುಸಿಯುವಂತೆ ಮಾಡಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.