ಹಾಸನ: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿ ಮನನೊಂದ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. 40 ವರ್ಷದ ಹರಿಣಾಕ್ಷಿ ಎಂಬವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು 16 ವರ್ಷಗಳ ಹಿಂದೆ ಶೇಖರ್ ಎಂಬವರೊಂದಿಗೆ ವಿವಾಹವಾಗಿದ್ದರು. ಆದರೆ ಪತಿ ತನ್ನ ಪತ್ನಿಯನ್ನು ಸದಾ ಅನುಮಾನದಿಂದ ನೋಡುತ್ತಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಎರಡೂ ಕುಟುಂಬಗಳ ಹಿರಿಯರು ಹಲವು ಬಾರಿ ರಾಜಿ ಸಂಧಾನ ಕೂಡ ಮಾಡಿದ್ದರು. ಆದರೂ ಪತಿ-ಪತ್ನಿ ನಡುವೆ ಜಗಳ ನಡೆಯುತ್ತಲೇ ಇತ್ತು. ಈ ಅನುಮಾನಿತ ನಡವಳಿಕೆಯೇ ದಂಪತಿಗಳಿಗೆ ನಡುವಿನ ವಿರಸಕ್ಕೆ ಕಾರಣವಾಯಿತು.
ಇದರಿಂದ ಮನನೊಂದಿದ್ದ ಹರಿಣಾಕ್ಷಿ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.