ಸೆಸ್ಕ್ ಮಹದೇವಪುರ ಶಾಖಾ ಕಚೇರಿ ಉದ್ಘಾಟನೆ
ಮಂಡ್ಯ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ದ ಶ್ರೀರಂಗಪಟ್ಟಣ ಉಪ ವಿಭಾಗ ವ್ಯಾಪ್ತಿಯ ಮಹದೇವಪುರ ಶಾಖಾ ಕಚೇರಿಯನ್ನು ಶಾಸಕರೂ ಆಗಿರುವ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಅವರು ಸೋಮವಾರ ಉದ್ಘಾಟಿಸಿದರು.

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಬಂಡಿಸಿದ್ದೇಗೌಡ ಅವರು, “ಮದಹೇವಪುರ ಶಾಖಾ ಕಚೇರಿ ಆರಂಭಿಸುವಂತೆ ಬಹುದಿನಗಳಿಂದ ಬೇಡಿಕೆ ಇತ್ತು. ಅದರಂತೆ ಈಗ ಶಾಖಾ ಕಚೇರಿ ಆರಂಭಿಸಲಾಗಿದೆ. ಈ ಭಾಗದ ಜನರು ಇದರ ಅನುಕೂಲ ಪಡೆದುಕೊಳ್ಳಬಹುದು” ಎಂದರು.
“ಈ ಭಾಗದಲ್ಲಿನ ರೈತರು ಅನಧಿಕೃತ ಐಪಿ ಸೆಟ್ಗಳನ್ನು ನಿಗದಿತ ಠೇವಣಿ ಹಣ ಪಾವತಿಸಿ ಅಧಿಕೃತ ಮಾಡಿಕೊಳ್ಳಬೇಕಿದೆ. ಲೈನ್ ಮೆನ್ ಗಳು ಅನಧಿಕೃತ ಐಪಿ ಸೆಟ್ ಗಳನ್ನು ಅಧಿಕೃತ ಮಾಡಿಕೊಳ್ಳುವ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಹಾಗೂ ರೈತರೊಂದಿಗೆ ಸಮಾಧಾನದಿಂದ ವರ್ತಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಅಲ್ಲದೆ, ಲೈನ್ ಮನ್ ಗಳು ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಬೇಕೆಂದು” ಸಲಹೆ ನೀಡಿದರು.
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ.ಮುನಿಗೋಪಾಲ್ ರಾಜು ಅವರು ಮಾತನಾಡಿ, “ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸರಳೀಕೃತಗೊಳಿಸುವ ಸಲುವಾಗಿ ಜನರ ಬೇಡಿಕೆಯಂತೆ ಮಹದೇವಪುರ ಶಾಖಾ ಕಚೇರಿ ಆರಂಭಿಸಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಂಡು ನಿಗದಿತ ಸಮಯಕ್ಕೆ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕು”, ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಇಂಜಿನಿಯರ್ ಡಿ.ಜೆ.ದಿವಾಕರ್, ಸೆಸ್ಕ್ ಮಂಡ್ಯ ವೃತ್ತದ ಅಧೀಕ್ಷಕ ಇಂಜಿನಿಯರ್ ಸೋಮಶೇಖರ್, ಮುಖ್ಯ ಆರ್ಥಿಕ ಅಧಿಕಾರಿ ರೇಣುಕಾ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.