Sunday, June 15, 2025
Google search engine

Homeರಾಜಕೀಯಅಗತ್ಯ ಬಿದ್ದರೆ 'ವಿಶೇಷ ಕಾರ್ಯಪಡೆ’ ರಾಜ್ಯಾದ್ಯಂತ ವಿಸ್ತರಣೆ: ಗೃಹ ಸಚಿವ ಡಾ. ಜಿ. ಪರಮೇಶ್ವರ

ಅಗತ್ಯ ಬಿದ್ದರೆ ‘ವಿಶೇಷ ಕಾರ್ಯಪಡೆ’ ರಾಜ್ಯಾದ್ಯಂತ ವಿಸ್ತರಣೆ: ಗೃಹ ಸಚಿವ ಡಾ. ಜಿ. ಪರಮೇಶ್ವರ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮು ಹಿಂಸೆ ನಿಯಂತ್ರಣಕ್ಕೆ ಸರ್ಕಾರವು ರಚಿಸಿರುವ ವಿಶೇಷ ಕಾರ್ಯಪಡೆ ಮುಂಬರುವ ದಿನಗಳಲ್ಲಿ ಅಗತ್ಯವಿದ್ದಲ್ಲಿ ಇಡೀ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

ಅವರು ಮಂಗಳೂರಿನಲ್ಲಿ ಎಸ್‌ಎಎಫ್ ಕಚೇರಿ ಹಾಗೂ ಪೊಲೀಸ್ ವಸತಿಗೃಹಗಳ ಸಮುಚ್ಚಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ವಿಷಯವನ್ನು ಸ್ಪಷ್ಟಪಡಿಸಿದರು. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಯಾವುದೇ ರಾಜ್ಯ ಸರ್ಕಾರ ಕೋಮು ಹಿಂಸೆಯನ್ನು ನಿಯಂತ್ರಿಸುವ ಉದ್ದೇಶದಿಂದ ಇಂತಹ ವಿಶೇಷ ಕಾರ್ಯಪಡೆಯನ್ನು ರಚಿಸಿದ್ದು, ಇದು ಕರ್ನಾಟಕದ ಹೆಮ್ಮೆ ವಿಷಯವಾಗಿದೆ ಎಂದು ಅವರು ಹೇಳಿದರು.

ನಕ್ಸಲ್‌ ನಿಗ್ರಹ ಪಡೆಯ ಸಿಬ್ಬಂದಿ ಈ ಕಾರ್ಯಪಡೆಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಅಗತ್ಯ ಬಂದಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಇಲ್ಲಿನ ನಾಗರೀಕರು ಸಹಕಾರ ನೀಡಿದರೆ ಈ ಕಾರ್ಯಪಡೆಗೆ ಕೆಲಸವೇ ಇರುವುದಿಲ್ಲ. ಬೇರೆ ಜಿಲ್ಲೆಗೆ ಇಂತಹ ಕಾರ್ಯಪಡೆಯ ಅಗತ್ಯ ಬರಲಾರದು ಎಂದು ಭಾವಿಸಿದ್ದೇವೆ. ಒಟ್ಟಿನಲ್ಲಿ ರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎಂದು ಹೇಳಿದರು.

ನಾನು ಹಿಂದೆ ಗೃಹ ಸಚಿವನಾಗಿದ್ದಾಗ ಬೆಂಗಳೂರಿನ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿದ್ದಾಗ ಚಿಕ್ಕ ಚಿಕ್ಕ ಮನೆಗಳಲ್ಲಿ ಪೊಲೀಸರು ವಾಸಿಸುವ ಸ್ಥಿತಿ ನೋವುಂಟಾಗಿತ್ತು. ರಾಜ್ಯಾದ್ಯಂತ ಪೊಲೀಸರಿಗೆ ಸುಸಜ್ಜಿತ ವಸತಿಗೃಹ ನಿರ್ಮಾಣ ಮಾಡಬೇಕು ಎಂದು ಅಂದೇ ಯೋಚಿಸಿದ್ದೆ. ಈ ಯೋಜನೆಗೆ ಅನುದಾನವೂ ಸರ್ಕಾರದಿಂದ‌ ದೊರೆಯಿತು‌. ಮಂಗಳೂರು ನಗರ ಹಾಗೂ ಬೆಳ್ತಂಗಡಿ ಪೊಲೀಸ್ ವಸತಿ ಗೃಹಗಳನ್ನು ‌ಉದ್ಘಾಟಿಸಲಾಗಿದೆ. ಪ್ರತಿ ವಸತಿಗೃಹವನ್ನು ಅಂದಾಜು ರೂ. 28 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರಸ್ತುತ ಶೇ.‌ 40 ಪೊಲೀಸ್ ಸಿಬ್ಬಂದಿ ವಸತಿಗೃಹಗಳಲ್ಲೇ ವಾಸಿಸುತ್ತಿದ್ದಾರೆ. ಈ ಪ್ರಮಾಣ ಶೇ 80 ಕ್ಕೆ ತಲುಪಬೇಕು ಎಂಬ ಗುರಿ ಹೊಂದಲಾಗಿದೆ ಎಂದು ಗೃಹ ಸಚಿವರು ಹೇಳಿದರು‌.

 ರಾಜ್ಯದಲ್ಲಿ ಪೊಲೀಸ್ ಇಲಾಖೆ ಉತ್ತಮ ಕೆಲಸ‌‌ ಮಾಡುತ್ತಿದ್ದು, ಶೇ. 99 ರಷ್ಟು ಕೊಲೆ‌ ಪ್ರಕರಣಗಳನ್ನು ಪತ್ತೆ ಮಾಡಿ ಕಾನೂನು ಕ್ರಮ  ಜರುಗಿಸಲಾಗುತ್ತಿದೆ. ಸೈಬರ್ ಅಪರಾಧ ಹೆಚ್ಚುತ್ತಿದ್ದು, ಪ್ರತಿ ಕಾನ್‌ ಸ್ಟೇಬಲ್ ಸೈಬರ್ ಅಪರಾಧ ಪತ್ತೆ ಹಚ್ಚುವಲ್ಲಿ ತಜ್ಞತೆ ಪಡೆಯಬೇಕೆಂಬ ಉದ್ದೇಶದಿಂದ ಎಲ್ಲ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ತರಬೇತಿ ವಿಭಾಗ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಶೈಕ್ಷಣಿಕ, ವಾಣಿಜ್ಯಿಕ ವಾಗಿ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಕೋಮು ದ್ವೇಷವೇ ಕಫ್ಪುಚುಕ್ಕೆಯಾಗಿದೆ. ಇದನ್ನು‌ ನಿಯಂತ್ರಿಸಲು ರಚನೆ‌ ಮಾಡಿರುವ ಎಸ್ ಎ ಎಫ್ ಅನ್ನು ಶೇ 90ರಷ್ಟು ಜನರು ಸ್ವಾಗತಿಸಿದ್ದಾರೆ. ಶೇ 5 ರಷ್ಟು ಜನರಿಗೆ ಇದರಿಂದ ತೊಂದರೆ ಆಗಬಹುದು. ಕಾನೂನು ಬಾಹಿರ ಚಟುವಟಿಕೆ‌ ನಿಯಂತ್ರಿಸಿ ಜನರು ಶಾಂತಿಯಿಂದ‌ ನೆಲೆಸಬೇಕು ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಮತ್ತು ಪೊಲೀಸ್ ಮಹಾ ನಿರೀಕ್ಷಕ ಡಾ.ಎಂ.ಎ.ಸಲೀಂ, ಕೋಮು ಸಂಘರ್ಷ ಹತ್ತಿಕ್ಕುವ ಸಲುವಾಗಿ ದ.ಕ., ಉಡುಪಿ ಮತ್ತು ಶಿವಮೊಗ್ಗವನ್ನು ಕೇಂದ್ರೀಕರಿಸಿಕೊಂಡು ರಾಜ್ಯ ಸರಾಕರ ಸ್ಥಾಪಿಸಿರುವ ವಿಶೇಷ ಕಾರ್ಯಪಡೆ ದೇಶದಲ್ಲೇ ಪ್ರಥಮವಾಗಿದೆ. ಇದು ದೇಶಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸಲಿ. ಒಂದೂವರೆ ತಿಂಗಳಲ್ಲಿ ಈ ಪಡೆಯನ್ನು ರಾಜ್ಯ ಸರಕಾರ ರಚಿಸಿದೆ ಎಂದರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ಅಶೋಕ್ ಕುಮಾರ್ ರೈ, ಮಂಜುನಾಥ ಭಂಡಾರಿ, ಐವನ್ ಡಿಸೋಜ, ಅಪರ ಪೊಲೀಸ್ ಮಹಾ ನಿರ್ದೇಶಕ ಎಸ್. ಮುರುಗನ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಸ್ಪಿ ಡಾ.ಅರಣ್ ಕುಮಾರ್, ಜಿಪಂ ಸಿಇಒ ಡಾ.ಆನಂದ್, ವಿವಿಧ ಅಕಾಡಮಿ ಹಾಗೂ ನಿಗಮಗಳ ಅಧ್ಯಕ್ಷರು, ಮಾಜಿ ಸಚಿವರು ಹಾಗೂ ಸಂಸದರು ಈ ಸಂದರ್ಭ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular