ಬೆಂಗಳೂರು: ಕರ್ನಾಟಕದ ಲೋಕಾಯುಕ್ತ ಲಂಚ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ತನಿಖೆಯಲ್ಲಿ ‘ಡೈರಿ ಮಿಸ್ಟರಿ’ ಬೆಳಕಿಗೆ ಬಂದಿದೆ. ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಷಿ ಹಾಗೂ ನಿಂಗಪ್ಪ ಸೇರಿರುವ ಭ್ರಷ್ಟಾಚಾರದ ಆರೋಪದ ತನಿಖೆಯಲ್ಲಿ ಹೊಸ ಟ್ವಿಸ್ಟ್ಗಳು ಉಂಟಾಗುತ್ತಿವೆ.
ಲೋಕಾಯುಕ್ತ ಅಧಿಕಾರಿಗಳು ಈಚೆಗೆ ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಷಿಯವರ ನಿವಾಸದಲ್ಲಿ ದಾಳಿ ನಡೆಸಿದಾಗ, ಹೆಚ್ಚಿನ ದಾಖಲೆಗಳು ಸಿಕ್ಕಿಲ್ಲ ಎಂಬ ನಿರಾಶೆಯೊಂದಿಗೆ ಹಿಂದಿರುಗಿದ್ದರು. ಆದರೆ ತನಿಖಾಧಿಕಾರಿಗಳು ನಿಂಗಪ್ಪನ ಮನೆಗೆ ದಾಳಿ ನಡೆಸಿದ್ದು, ಅಲ್ಲಿಂದ ಎರಡು ಮಹತ್ವಪೂರ್ಣ ಡೈರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ಎರಡೂ ಡೈರಿಗಳಲ್ಲಿ ಸಿಕ್ಕ ಒಂದಷ್ಟು ನಂಬರ್ಗಳನ್ನು ರಿಕವರಿ ಮಾಡಿದ್ದಾರೆ. ರಿಕವರಿ ಮಾಡಿದ ನಂಬರ್ಗಳು ಯಾವುವು? ಯಾರಿಗೆ ಸೇರಿದ್ದು? ಯಾರ ಜೊತೆಯಲ್ಲಿ ನಿರಂತರವಾಗಿ ಸಂಪರ್ಕವನ್ನು ಹೊಂದಿದ್ದರು ಎಂಬುದು ತನಿಖೆಯಿಂದ ಹೊರಬೀಳಲಿದೆ.
ನಿಂಗಪ್ಪ, ಈ ಭ್ರಷ್ಟಾಚಾರದ ಪ್ರಮುಖ ಮಧ್ಯವರ್ತಿಯಾಗಿದ್ದು, ರಾಜಕೀಯ ಹಾಗೂ ಇಲಾಖಾ ಮಟ್ಟದ ವ್ಯಕ್ತಿಗಳ ಸಂಪರ್ಕ ಹೊಂದಿದ್ದನೆಂಬ ಆರೋಪವಿದೆ. ಹೀಗಾಗಿ ಡೈರಿಗಳಲ್ಲಿ ಉಲ್ಲೇಖಿತ ವ್ಯಕ್ತಿಗಳ ಪಟ್ಟಿ ಬಹಳ ಮುಖ್ಯವಾದ ದಾಖಲೆಗಳಾಗಿ ಪರಿಗಣಿಸಲಾಗುತ್ತಿದೆ.
ನಿಂಗಪ್ಪ, ಅಬಕಾರಿ ಅಧಿಕಾರಿಗಳ ಜೊತೆಯಲ್ಲಿ ಸಂಪರ್ಕ ಹೊಂದಿದ್ದ. ಅವರಿಂದ ಲಂಚ ಪಡೆಯುವ ಪ್ರಯತ್ನಗಳೂ ಆಗಿತ್ತು ಎಂಬ ಆರೋಪವಿದೆ. ಹೀಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.