ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆ ತೆರೆಯಲು ಕರ್ನಾಟಕ ಹಾಲು ಮಹಮಂಡಳ (ಕೆಎಂಎಫ್) ಸಂಸ್ಥೆಗೆ ಸೂಚನೆ ನೀಡಿರುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬಿಎಂಆರ್ಸಿಎಲ್ ಟೆಂಡರ್ ಕರೆಯುತ್ತಿದ್ದಾಗ ಕೆಎಂಎಫ್ ಅರ್ಜಿ ಸಲ್ಲಿಸದ ಕಾರಣ ಅಮೂಲ್ ಮಳಿಗೆ ತೆರೆಯಲಾಗಿತ್ತು. ಇದೀಗ 10 ಸ್ಥಳಗಳ ಪೈಕಿ ಎರಡು ಕಡೆ ಅಮೂಲ್ ಮಳಿಗೆ ತೆರೆಯಲಾಗಿದೆ. ಉಳಿದ ಎಂಟು ಕಡೆಗಳಲ್ಲಿ ನಂದಿನಿ ಮಳಿಗೆ ಆರಂಭಿಸಲು ಅವಕಾಶ ನೀಡುವಂತೆ ನಿರ್ದೇಶನ ನೀಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ಕುಮಾರಪಾರ್ಕ್ ಸರ್ಕಾರಿ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು. ಪಕ್ಷ ಸಂಘಟನೆ, ಪಾಲಿಕೆ ಚುನಾವಣೆ ಹಾಗೂ ಜಿಬಿಎಯಲ್ಲಿ ಎಷ್ಟು ಪಾಲಿಕೆ ರಚನೆ ಮಾಡಬೇಕು ಎಂಬುದರ ಬಗ್ಗೆ ಶಾಸಕರೊಂದಿಗೆ ಚರ್ಚೆ ನಡೆದಿದೆ. ವಿರೋಧ ಪಕ್ಷದ ನಾಯಕರ ವಿಶ್ವಾಸ ಪಡೆಯುವ ಕೆಲಸ ಕೂಡ ನಡೆಯುತ್ತಿದೆ ಎಂದರು.
ಸ್ವಚ್ಛ ಬೆಂಗಳೂರು ಹೆಸರಿನಲ್ಲಿ ಕಸದ ಸಮಸ್ಯೆ ನಿವಾರಣೆಗೆ ಸಹಾಯವಾಣಿ ಆರಂಭಿಸಲಾಗಿದೆ. ಸಾರ್ವಜನಿಕರು ಕಸದ ಫೋಟೋ ತೆಗೆದು ನಿಗದಿತ ಸಂಖ್ಯೆಗೆ ಕಳುಹಿಸಿದರೆ, ಒಂದು ವಾರದಲ್ಲಿ ವಿಲೇವಾರಿ ಮಾಡಲಾಗುತ್ತದೆ. ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೂ ಅನುದಾನ ನೀಡಲಾಗುತ್ತಿದೆ.
ಆಸ್ತಿ ಖಾತಾ ದಾಖಲೆ ಆಂದೋಲನ ಜುಲೈ 1 ರಿಂದ ಆರಂಭವಾಗಲಿದ್ದು, ಪ್ರಾಯೋಗಿಕ ಯೋಜನೆಯಾಗಿ ಕೃಷ್ಣ ಭೈರೇಗೌಡ ಅವರ ಕ್ಷೇತ್ರದಲ್ಲಿ 25 ಸಾವಿರ ಆಸ್ತಿಗಳ ಇ-ಖಾತಾ ತಯಾರಾಗಿವೆ. ಇವು ಮನೆ ಬಾಗಿಲಿಗೆ ತಲುಪಿಸಲಾಗುವುದು. ಬೆಂಗಳೂರಿನಲ್ಲಿ ಸುಮಾರು 25 ಲಕ್ಷ ಆಸ್ತಿಗಳಿದ್ದು, ಇನ್ನು 20 ಲಕ್ಷ ದಾಖಲೆಗಳು ಬಾಕಿ ಇವೆ. ಜನರಲ್ಲಿ ಜಾಗೃತಿ ಮೂಡಿಸಲು ಪ್ರಚಾರ ನಡೆಯಲಿದೆ.
ವೈಟ್ ಟ್ಯಾಪಿಂಗ್, ರಸ್ತೆ ಅಭಿವೃದ್ಧಿ, ಮರ ಬೀಳುವ ಸಮಸ್ಯೆಗಳ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ, ಬಿಬಿಎಂಪಿ ಅಧಿಕಾರಿಗಳು ಆದ್ಯತೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.