ಚಾಮರಾಜನಗರ: ಸಾಹಿತಿಗಳಿಂದ ಕನ್ನಡದ ಶಬ್ದ ಭಂಡಾರ ,ಚಿಂತನೆ, ಸಾಹಿತ್ಯ ಅಪಾರವಾಗಿ ಬೆಳೆದಿದೆ ಸಾಹಿತಿಗಳಿಗೆ ಕನ್ನಡಿಗರು ಸದಾ ಗೌರವವನ್ನು ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಹಿತ್ಯ ಮಂಥನ ಚಿಂತನ ಕಾರ್ಯಕ್ರಮದಲ್ಲಿ ಮಾಸ್ತಿ ಕನ್ನಡದ ಆಸ್ತಿ ಕಾರ್ಯಕ್ರಮದಲ್ಲಿ ಮಾತನಾಡುತ್ತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಅಧಿಕಾರಿಗಳಾಗಿ, ಸಾಹಿತಿಗಳಾಗಿ ರಾಷ್ಟ್ರಕ್ಕೆ ಗೌರವವನ್ನು ತಂದವರು. ಸಣ್ಣ ಕಥೆಗಳ ಜನಕರಾಗಿ ಶ್ರೀನಿವಾಸ ಎಂಬ ಕಾವ್ಯನಾಮದಿಂದ ಕಾದಂಬರಿ ,ಕಾವ್ಯ, ನಾಟಕ, ಜೀವನ ಚರಿತ್ರೆ ,ಪ್ರಬಂಧ, ವಿಮರ್ಶೆ ,ಸಂಪಾದನೆ, ಅನುವಾದ ಧಾರ್ಮಿಕ ಕೃತಿಗಳು ,ಜೀವನ ಚರಿತ್ರೆಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ವಿಶ್ವವಿಖ್ಯಾತಗೊಳಿಸಿದ್ದಾರೆ. ಕನ್ನಡಿಗರಿಗೆ ಮತ್ತು ಕನ್ನಡದ ಸಾಹಿತಿಗಳಿಗೆ ಆದರ್ಶ ಪುರುಷರಾಗಿದ್ದಾರೆ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಚಿಕ್ಕವೀರರಾಜೇಂದ್ರ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು .ಕನ್ನಡಿಗರ ಹೆಮ್ಮೆ. ಮಾಸ್ತಿಯವರ ಸಣ್ಣ ಕಥೆಗಳಾದ ರಂಗನ ಮದುವೆ ,ಮಾತುಗಾರ ರಾಮಣ್ಣ ಜನ ಜನತವಾಗಿದೆ. ಮಾಸ್ತಿ ಅವರ ಕಥೆಗಳು ಜೀವನ ದರ್ಶನವನ್ನು ನೀಡುತ್ತದೆ. ಕುಶಲತೆ ,ಸೌಮ್ಯತೆ, ಭಾವ ಪ್ರಧಾನ ಹಾಗೂ ವಿಶೇಷ ಜೀವನಾನುನುಭವಗಳನ್ನು ಕಾಣಬಹುದು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ರಾಜಸೇವಾಸಕ್ತ ಬಿರುದನ್ನು ಪಡೆದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ನಿಜವಾದ ಕನ್ನಡದ ಆಸ್ತಿ ಹಾಗೂ ಸಂಪತ್ತು ಆಗಿದ್ದಾರೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪ್ರತಿ ಮಂಗಳವಾರ ಸಂಜೆ ಸಾಹಿತ್ಯ ಮಂಥನ ಚಿಂತನ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷ ತಂದಿದೆ . ಕನ್ನಡ ಸಾಹಿತ್ಯದ ವಿಶೇಷ ಅಂಶಗಳನ್ನು ತಿಳಿಯಲು ಸಹಾಯವಾಗುತ್ತದೆ ಎಂದು ನಿವೃತ್ತ ಶಿಕ್ಷಕರಾದ ಸರಸ್ವತಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಬಿಕೆ ಆರಾಧ್ಯ ಮಾತನಾಡಿ ಕನ್ನಡ ಸಾಹಿತ್ಯ ಶ್ರೀಮಂತವಾದದ್ದು. .ಸಾಹಿತಿಗಳು ಕನ್ನಡಕ್ಕೆ ನೀಡಿರುವ ಕೊಡುಗೆಗಳ ಕುರಿತು ನಿರಂತರವಾಗಿ ಸಾಹಿತ್ಯ ಕಾರ್ಯಕ್ರಮಗಳನ್ನು ರೂಪಿಸಿ ಕನ್ನಡದ ಸೇವೆಯನ್ನು ಸಲ್ಲಿಸಲಾಗುತ್ತಿದೆ . ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಜೀವನ ಮತ್ತು ಸಾಹಿತ್ಯ ಕೊಡುಗೆ ಅಧ್ಯಯನ ಬಹಳ ಮುಖ್ಯವಾದದ್ದು ಎಂದರು.
ಕಾರ್ಯಕ್ರಮದಲ್ಲಿ ಎಸ್ ಲಕ್ಷ್ಮೀನರಸಿಂಹ ,ಶಿವಲಿಂಗ ಮೂರ್ತಿ ,ಪದ್ಮಪುರುಷೋತ್ತಮ್ ರವಿಚಂದ್ರ ಪ್ರಸಾದ್, ಕಾರ್ ಕುಮಾರ್ ಉಪಸ್ಥಿತರಿದ್ದರು.