ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಜೂನ್ 19ರಂದು ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಸರ್ಕಾರ ದಿಢೀರ್ ರದ್ದುಗೊಳಿಸಿ, ಜುಲೈ 2ಕ್ಕೆ ಮುಂದೂಡಲಾಗಿದೆ. ಜೂನ್ 19ರಂದು ನಂದಿ ಬೆಟ್ಟದಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿದ್ದರೂ, ಸ್ಥಳಾಂತರಿಸಿ ವಿಧಾನಸೌಧದಲ್ಲಿ ಸಭೆ ನಡೆಸಲಾಯಿತು.
ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಗೆ ಸೇರಿದ ಕೆಲವು ಇಲಾಖೆಗಳಿಂದ ಪ್ರಸ್ತಾವನೆಗಳು ಈಗಾಗಲೇ ಲಭ್ಯವಾಗಿಲ್ಲ. ಅಲ್ಲದೆ, ಸ್ಥಳೀಯ ನಾಯಕರು ಹಾಗೂ ಸಚಿವರಿಂದ ವಿಶೇಷ ಮನವಿ ಬಂದ ಹಿನ್ನೆಲೆಯಲ್ಲಿ ನಂದಿ ಬೆಟ್ಟದ ಚಟುವಟಿಕೆಗಳನ್ನು ಮುಂದೂಡಲಾಗಿದೆ.
ನಂದಿ ಬೆಟ್ಟದಲ್ಲಿ ಸಭೆ ಆಯೋಜನೆಗೆ ಆಗಲೇ ಸಿದ್ಧತೆಗಳು ನಡೆದಿದ್ದು, ರಸ್ತೆ ಅಭಿವೃದ್ಧಿ, ಕಟ್ಟಡ ನವೀಕರಣ, ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ಕಾರ್ಯ ಆರಂಭವಾಗಿದೆ.
ಇದೀಗ ನಂದಿ ಬೆಟ್ಟದಲ್ಲಿ ಮುಖ್ಯಮಂತ್ರಿ ನೇತೃತ್ವದ ಸಂಪುಟ ಸಭೆ ನಡೆಯಲಿರುವುದು ಸ್ಥಳೀಯರ ಸಂತಸಕ್ಕೆ ಕಾರಣವಾಗಿದೆ.