ಮೈಸೂರು: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಭಾರೀ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಸಚಿವ ಹೆಚ್.ಸಿ. ಮಹದೇವಪ್ಪ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ನವೆಂಬರ್ ತಿಂಗಳಲ್ಲಿ ಸಿಎಂ ಬದಲಾವಣೆಯಾಗಬಹುದು ಎಂಬ ಊಹಾಪೋಹಗಳಿಗೆ ತೆರೆ ಎಳೆದಂತೆಯೇ ಅವರು ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಹದೇವಪ್ಪ, “ಸಿದ್ದರಾಮಯ್ಯನವರ ಸಿಎಂ ಕುರ್ಚಿ ಬಹಳ ಗಟ್ಟಿ. ಅವರಿಗೆ ಜನರ ಬೆಂಬಲವಿದೆ, ಪಕ್ಷದ ಆಂತರಿಕ ಸಂಘಟನೆಯೂ ಅವರ ಪರವಿದೆ. ಹಾಗಾಗಿ ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಅವರು ಅಧಿಕಾರಕ್ಕೆ ಬಂದದ್ದು ಆಪರೇಷನ್ ಕಮಲದ ಮೂಲಕ. ಅವರು ಯಾವ ತಂತ್ರ, ಯಾವ ಯೋಜನೆಗಳನ್ನು ಈಗಾಗಲೇ ಹಾಕಿಕೊಳ್ಳುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ ನಮ್ಮ ಪಕ್ಷದಲ್ಲಿ ಯಾವುದೇ ಬದಲಾವಣೆ ಚಿಂತನೆ ನಡೆಯುತ್ತಿಲ್ಲ.
ಇದೇ ವೇಳೆ ವಸತಿ ಯೋಜನೆಯ ಮನೆ ಹಂಚಿಕೆ ಕುರಿತು ಹಣ ಪಡೆದ ಆರೋಪಗಳ ಸಂಬಂಧ ಮಾಡಲಾಗಿರುವ ಆಡಿಯೋ ಕ್ಲಿಪ್ ಬಗ್ಗೆ ಮಾತನಾಡಿದ ಮಹದೇವಪ್ಪ, ನಾನು ಕೂಡ ಆ ಆಡಿಯೋ ಕೇಳಿದ್ದೇನೆ. ಯಾರಾದರೂ ಅವ್ಯವಹಾರ ಮಾಡಿದ್ದಾರೆ ಎಂಬುದು ಸತ್ಯವಾಗಿದ್ರೆ, ಕಾನೂನು ಪ್ರಕಾರ ತಕ್ಷಣವೇ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.