ಬೆಂಗಳೂರು: ಬೆಂಗಳೂರಿನಲ್ಲಿ ಹೈಟೆನ್ಶನ್ ವಿದ್ಯುತ್ ಶಾಕ್ ನಿಂದ 10 ವರ್ಷದ ಬಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರಿನ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಘಟನೆ ಜೂನ್ 15ರಂದು ಸಂಜೆ ನಡೆದಿದೆ. ಆಟವಾಡುತ್ತಿದ್ದ ವೇಳೆ ಅನಂತ್ ಎಂಬ 10 ವರ್ಷದ ಬಾಲಕ ಪೊರಕೆಯನ್ನು ಎಸೆದುಬಿಟ್ಟಾಗ ಅದು ಹೈಟೆನ್ಶನ್ ತಂತಿಗೆ ತಗುಲಿದೆ. ತಕ್ಷಣವೇ ವಿದ್ಯುತ್ ಶಾಕ್ನಿಂದ ಗಂಭೀರ ಗಾಯಗೊಂಡ ಬಾಲಕನನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ.
ಮೃತ ಬಾಲಕ ಅನಂತ್ ಮತ್ತು ಅವರ ಕುಟುಂಬ ಮೂಲತಃ ನೇಪಾಳದವರು. ಬೆಂಗಳೂರಿಗೆ ಎರಡು ವರ್ಷಗಳ ಹಿಂದೆ ವಲಸೆ ಬಂದಿದ್ದರು. ಮೃತ ಬಾಲಕನ ತಾಯಿ ಹಲವು ಮನೆಗಳಲ್ಲಿ ಹೌಸ್ಕೀಪಿಂಗ್ ಕೆಲಸ ಮಾಡುತ್ತಿದ್ದರು. ತಾಯಿ ತನ್ನ ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಂಡಿದ್ದರೆ, ಇದೀಗ ಈ ದುರ್ಘಟನೆ ಅವಳನ್ನು ಮಾನಸಿಕವಾಗಿ ಕಂಗೆಡಿಸಿದೆ. ಅನಂತನ ಸಾವಿನ ಸುದ್ದಿಯೊಂದಿಗೆ ಅವರ ಆಕ್ರಂದನ ಮುಗಿಲು ಮುಟ್ಟಿದೆ.
ಅನಂತನ ಸಾವಿನ ನಂತರ, ಕಟ್ಟಡದ ಮಾಲೀಕ, ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಬೆಸ್ಕಾಂ ಹಾಗೂ ಬಿಬಿಎಂಪಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇವುಗಳಲ್ಲಿ ಯಾರು ಹೊಣೆಗಾರರಾಗಿ ಹೊರಹೊಮ್ಮುತ್ತಾರೆ ಎಂಬ ವಿಚಾರದಲ್ಲಿ ತನಿಖೆ ಮುಂದುವರಿಯಲಿದೆ.