ಬೆಂಗಳೂರು: ಬಡವರ ಮನೆ ಮಂಜೂರಿಗಾಗಿ ಲಂಚ ನೀಡಬೇಕು ಎಂಬ ಗಂಭೀರ ಆರೋಪವನ್ನು ಮಾಡಿದ್ದ ಆಡಳಿತ ಪಕ್ಷದ ಶಾಸಕ ಬಿ.ಆರ್. ಪಾಟೀಲ್, ಇಂದು ಮತ್ತೆ ತಮ್ಮ ಹೇಳಿಕೆಯನ್ನು ಪುನರ್ ದೃಢಪಡಿಸಿದ್ದು, ಕಾಂಗ್ರೆಸ್ ಸರ್ಕಾರ ತೀವ್ರಾ ಸಂಕಷ್ಟಕ್ಕೆ ಸಿಲುಕಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, “ಆಡಿಯೋದಲ್ಲಿ ಕೇಳಿಸಿಕೊಂಡದ್ದು ನಾನೇ. ನಾನು ಸುಳ್ಳು ಮಾತನಾಡಿಲ್ಲ, ನಡೆಯುತ್ತಿರುವ ಸತ್ಯವನ್ನೇ ಬಯಲಿಗೆ ತಂದಿದ್ದೇನೆ,” ಎಂದು ಸ್ಪಷ್ಟಪಡಿಸಿದರು. ತಮ್ಮ ಕ್ಷೇತ್ರದ ಐದಾರು ಪಂಚಾಯಿತಿಗಳಲ್ಲಿ ಹಣ ಕೊಟ್ಟು ಮನೆ ಮಂಜೂರಾದ ಉದಾಹರಣೆಗಳನ್ನು ಅವರು ಉಲ್ಲೇಖಿಸಿದರು.
2 ಸಾವಿರ ಮನೆಗಳ ಬೇಡಿಕೆಯ ನಡುವೆ, ತಮ್ಮ ಶಿಫಾರಸುಗಳಿಗಿಂತ ಪಂಚಾಯಿತಿ ಅಧ್ಯಕ್ಷರ ಶಿಫಾರಸುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಪಂಚಾಯಿತಿ ಅಧ್ಯಕ್ಷರು ನನಗಿಂತ ಪ್ರಬಲರಾಗಿದ್ದಾರೆ,” ಎಂದು ವ್ಯಂಗ್ಯವಾಡಿದರು.
ಹೈಕಮಾಂಡ್ ವರದಿ ಕೇಳಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಪಾಟೀಲ್, “ನಾನಿನ್ನೂ ವರದಿ ನೀಡುವಷ್ಟು ಎತ್ತರಕ್ಕೆ ಬೆಳೆದಿಲ್ಲ,” ಎಂದು ತಿರುಗೇಟು ನೀಡಿದರು. ನಾನು ಹೇಳಿರುವುದರಲ್ಲಿ ತಪ್ಪಿಲ್ಲ. ಸತ್ಯವನ್ನೇ ಹೇಳಿದ್ದೇನೆ. ನನ್ನ ಹೊಟ್ಟೆ ಕೆಟ್ಟಿತ್ತು. ಔಷಧಿ ತೆಗೆದುಕೊಂಡಿದ್ದೇನೆ ಎಂದು ಪ್ರಸ್ತುತ ಸನ್ನಿವೇಶಕ್ಕೆ ಬಿ.ಆರ್.ಪಾಟೀಲ್ ಸಮರ್ಥನೆ ನೀಡಿದ್ದಾರೆ. ಬಿಜೆಪಿಯವರೇನೂ ಸಾಚಾಗಳಲ್ಲ. ಭ್ರಷ್ಟಾಚಾರದಿಂದಾಗಿ ರಾಜ್ಯವನ್ನು ಹದಗೆಡಿಸಿ ಹೋಗಿರುವವರೇ ಅವರು ಎಂದು ಬಿ.ಆರ್.ಪಾಟೀಲ್ ತಿರುಗೇಟು ನೀಡಿದ್ದಾರೆ.
ಇದರಿಂದ ರಾಜ್ಯ ಸರ್ಕಾರ ಮುಜುಗರಕ್ಕೆ ಸಿಲುಕಿದ್ದು, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ನೇರವಾಗಿ ಟೀಕಿಸಿರುವುದು ಮತ್ತಷ್ಟು ತೀವ್ರತೆ ತಂದಿದೆ. ಬಿ.ಆರ್. ಪಾಟೀಲ್ ಸ್ವತಃ ಸಿದ್ದರಾಮಯ್ಯ ಆಪ್ತರಾಗಿದ್ದು, ಇತ್ತೀಚೆಗೆ ಗ್ಯಾರಂಟಿ ಯೋಜನೆಗಳ ಹಣ ಕೊರತೆಯ ಬಗ್ಗೆ ಹೇಳಿಕೆ ನೀಡಿದ್ದೊಂದಿಗೆ, ಅವರ ಮಾತುಗಳು ಬಿಜೆಪಿ ವಿರುದ್ಧದ ಹೋರಾಟದಲ್ಲಿರುವ ಕಾಂಗ್ರೆಸ್ ಸರ್ಕಾರದ ಹಿಂಭಾಗಕ್ಕೆ ಬಾಣವಾಗಿ ಬಿಟ್ಟಿದೆ.
ರಾಜ್ಯ ರಾಜಕಾರಣದಲ್ಲಿ ಈ ಬೆಳವಣಿಗೆ ಭಾರೀ ಸಂಚಲನ ಮೂಡಿಸಿದೆ.