ಮೈಸೂರು: ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟದಲ್ಲಿ 2025ರ ಆಷಾಢ ಮಾಸದ ಹಿನ್ನೆಲೆ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಭದ್ರತಾ ಕ್ರಮವಾಗಿ ಮೊಬೈಲ್ ಹಾಗೂ ಕ್ಯಾಮರ ಬಳಕೆಗೆ ಸಂಪೂರ್ಣ ನಿಷೇಧ ಜಾರಿಯಾಗಿದೆ. ವಿಶೇಷವಾಗಿ ಅಷಾಢ ಶುಕ್ರವಾರಗಳಂದು ಈ ನಿಯಮ ಕಡ್ಡಾಯವಾಗಿದೆ.
ಈ ವರ್ಷ, ಶ್ರೀ ವಿಶ್ವಾವಸು ನಾಮ ಸಂವತ್ಸರದ ಮೊದಲ ಆಷಾಢ ಶುಕ್ರವಾರ ಜೂನ್ 27ರಂದು ನಡೆಯಲಿದೆ. ಮುಂದಿನ ಶುಕ್ರವಾರಗಳು ಜುಲೈ 4, 11 ಹಾಗೂ 18ರಂದು ಬರಲಿದ್ದು, ಜುಲೈ 17 ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಉತ್ಸವ ನಡೆಯಲಿದೆ. ಈ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 5.30ಕ್ಕೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ನಂತರ ಸಹಸ್ರನಾಮಾರ್ಚನೆ, ಮಂಗಳಾರತಿ, ಚಿನ್ನದ ಪಲ್ಲಕ್ಕಿ ಉತ್ಸವ ಮತ್ತು ರಾತ್ರಿ ದರ್ಬಾರ್ ಉತ್ಸವ ಜರುಗಲಿದೆ.
ಭಕ್ತರು ಈ ಅವಧಿಯಲ್ಲಿ ದೇವಾಲಯದ ಗರ್ಭಗುಡಿ, ಉತ್ಸವ ಮೂರ್ತಿ ಮತ್ತು ಪ್ರಾಂಗಣದಲ್ಲಿ ಯಾವುದೇ ರೀತಿಯ ಫೋಟೋ ಅಥವಾ ವಿಡಿಯೋ ತಗೆದುಕೊಳ್ಳಲು ಪೂರ್ತಿಯಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಾಧನಗಳನ್ನು ಶಾಶ್ವತವಾಗಿ ವಶಪಡಿಸಿಕೊಳ್ಳಲಾಗುತ್ತದೆ. ಮಾತ್ರವಲ್ಲದೆ, ಈ ಬಾರಿ ಉತ್ಸವದ ನೇರಪ್ರಸಾರವನ್ನು ಕೇವಲ ದೇವಾಲಯದ ಅಧಿಕಾರಿಗಳು ಮಾತ್ರ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಾರೆ.
ಶುಕ್ರವಾರದಿಂದ ಭಾನುವಾರವರೆಗೆ ಖಾಸಗಿ ವಾಹನಗಳಿಗೆ ಬೆಟ್ಟದ ಪ್ರವೇಶವಿಲ್ಲ. ಲಲಿತ ಮಹಲ್ ಆವರಣದಲ್ಲಿ ಉಚಿತ ಬಸ್ ವ್ಯವಸ್ಥೆ, ದರ್ಶನ ಟಿಕೆಟ್ ವಿತರಣೆ ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.