ನವದೆಹಲಿ: ನವದೆಹಲಿ ಭೇಟಿಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳನ್ನು ಭೇಟಿಯಾಗಿ ರಾಜ್ಯದ ಏಳು ಬಿಲ್ಲುಗಳಿಗೆ ಇನ್ನೂ ಅನುಮೋದನೆ ದೊರೆಯದಿರುವ ವಿಚಾರದಲ್ಲಿ ಚರ್ಚೆ ನಡೆಸಿದ್ದು, ಈ ಬಿಲ್ಲುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು. ಬಿಲ್ಲುಗಳನ್ನು ತರಿಸಿ ಶೀಘ್ರದಲ್ಲಿ ಅನುಮೋದನೆ ನೀಡಬೇಕೆಂದು ರಾಷ್ಟ್ರಪತಿಗಳಿಗೆ ಮನವಿ ಮಾಡಲಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, 16ನೇ ಹಣಕಾಸು ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿದ ಮಾಹಿತಿ ಹಂಚಿದರು. ಈ ಸಂದರ್ಭ ಅವರು, 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಶೇಕಡಾ 4.7ರಷ್ಟು ತೆರಿಗೆ ಹಂಚಿಕೆಯಾಗಿದ್ದರೆ, 15ನೇ ಆಯೋಗದಲ್ಲಿ ಶೇಕಡಾ 3.6ಕ್ಕೆ ಇಳಿಕೆಯಾಗಿದೆ. ಇದರ ಪರಿಣಾಮವಾಗಿ 5 ವರ್ಷಗಳಲ್ಲಿ ರಾಜ್ಯಕ್ಕೆ ಒಟ್ಟು 80,000 ಕೋಟಿ ರೂಪಾಯಿ ಕಡಿಮೆಯಾಗಿದೆ ಎಂದು ಅಂಶಪೂರಕವಾಗಿ ವಿವರಿಸಿದರು.
ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ
ಸಿದ್ದರಾಮಯ್ಯ ಅವರು, 63,000 ಕೋಟಿ ತೆರಿಗೆ ಹಂಚಿಕೆ ಹಾಗೂ 11,495 ಕೋಟಿ ವಿಶೇಷ ಅನುದಾನವನ್ನು ಕೇಂದ್ರವು ನೀಡದೇ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಪೆರಿಫೆರಲ್ ರಿಂಗ್ರೋಡ್ ಮತ್ತು ಕೆರೆ ಅಭಿವೃದ್ಧಿಗೆ ಕೇಂದ್ರದಿಂದ ನೆರವು ನೀಡಬೇಕೆಂದು ಆಗ್ರಹಿಸಿದರು.
ರಾಜ್ಯದ ಆರ್ಥಿಕ ಕೊಡುಗೆ ಹೆಚ್ಚು
ಕರ್ನಾಟಕ ದೇಶದ ಜನಸಂಖ್ಯೆಯಲ್ಲಿ 5% ಇದ್ದರೂ 8.7% ಜಿಡಿಪಿಗೆ ಕೊಡುಗೆ ನೀಡುತ್ತಿದೆ. ಜಿಎಸ್ಟಿಯಲ್ಲಿ ರಾಜ್ಯವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೂ ರಾಜ್ಯಕ್ಕೆ ಅನುದಾನ ಕಡಿತ ಮಾಡಿರುವುದು ಅಸಮಂಜಸವಾಗಿದೆ ಎಂದರು.
ವಿತ್ತೀಯ ಕೊರತೆ ಅನುದಾನ ಪಾಲಿನಲ್ಲಿ ಅಸಮಾನತೆ
ತಲಾವಾರು ಆದಾಯದ ಮಾನದಂಡವನ್ನು ಶೇಕಡಾ 45ರಿಂದ 20ಕ್ಕೆ ಇಳಿಸಲು ಹಾಗೂ ಕೇರಳ, ತಮಿಳುನಾಡು, ಆಂಧ್ರಪ್ರದೇಶಕ್ಕೆ ನೀಡಿದಂತೆಯೇ ಕರ್ನಾಟಕಕ್ಕೂ ಆದಾಯ ಕೊರತೆ ಅನುದಾನ ನೀಡಬೇಕೆಂದು ಅವರು ಒತ್ತಾಯಿಸಿದರು. ಕಾರ್ಯಕ್ಷಮ ರಾಜ್ಯಗಳಿಗೆ ಬದಲಾಗಿ ನಿರಂತರ ಕೊರತೆಯಲ್ಲಿರುವ ರಾಜ್ಯಗಳಿಗೆ ಅನುದಾನ ನೀಡುತ್ತಿರುವುದು ನ್ಯಾಯಸಮ್ಮತವಲ್ಲ ಎಂದು ಹೇಳಿದರು.
ವಿಶೇಷ ಅನುದಾನಕ್ಕೆ ಮನವಿ
ಬೆಂಗಳೂರು, ಮಲೆನಾಡು, ಪಶ್ಚಿಮಘಟ್ಟ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಿಗೆ ವಿಶೇಷ ಅನುದಾನ ನೀಡಬೇಕೆಂದು ಕೇಂದ್ರವನ್ನು ಕೇಳಲಾಗಿದೆ. ರಾಜ್ಯದ ಮನವಿಗೆ ಸಂಬಂಧಿಸಿ ಕೇಂದ್ರ ಹಣಕಾಸು ಸಚಿವೆ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.