ಬೆಂಗಳೂರು: ಅಡುಗೆ ಮಾಡುವ ವಿಚಾರದಲ್ಲಿ ಆರಂಭವಾದ ಜಗಳ, ಕೊನೆಗೆ ಪತ್ನಿಯ ಭೀಕರ ಹತ್ಯೆಯೊಂದಿಗೆ ಅಂತ್ಯಗೊಂಡಿದೆ. ಈ ಹೃದಯವಿದ್ರಾವಕ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಮತ್ತಿಕೆರೆ ಗ್ರಾಮದಲ್ಲಿ ನಡೆದಿದೆ. ತುರೆಮಣೆಯಿಂದ ಪತ್ನಿಯ ತಲೆಯ ಮೇಲೆ ಹೊಡೆದು ಪತಿ ಕೊಲೆಗೈದಿದ್ದಾನೆ.
ಮೃತಳನ್ನು 65 ವರ್ಷದ ತಿಮ್ಮಮ್ಮ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿ ಆಕೆಯ ಪತಿ ರಂಗಯ್ಯ ಎಂಬುವನು. ಅಡುಗೆ ಮಾಡುವ ವಿಚಾರಕ್ಕೆ ಶುರುವಾದ ಗಲಾಟೆ ತಾರಕಕ್ಕೇರಿ, ರಂಗಯ್ಯ ತನ್ನ ಕೈಯಲ್ಲಿದ್ದ ತುರೆಮಣೆಯಿಂದ ಪತ್ನಿ ತಿಮ್ಮಮ್ಮನ ತಲೆಗೆ ಭಾರಿಯಾಗಿ ಹೊಡೆದಿದ್ದಾನೆ. ಪತ್ನಿಯು ಸ್ಥಳದಲ್ಲೇ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ ನಂತರ, ರಂಗಯ್ಯ ಸ್ಥಳದಿಂದ ತಕ್ಷಣ ಪರಾರಿಯಾಗಲು ಪ್ರಯತ್ನಿಸಿದ್ದಾನೆ.
ಈ ವೇಳೆ ಪೊಲೀಸರು ರಾಮನಗರದಲ್ಲಿ ಆರೋಪಿ ರಂಗಯ್ಯನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆ ಕುರಿತಂತೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.