ಬೆಂಗಳೂರು: ರಾಜ್ಯವನ್ನು ಆರೋಗ್ಯಪೂರ್ಣವಾಗಿ ರೂಪಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್, ಕ್ಯಾನ್ಸರ್ ಆಸ್ಪತ್ರೆ ಹಾಗೂ ಹೃದ್ರೋಗ ಚಿಕಿತ್ಸಾ ಕೇಂದ್ರ ಸ್ಥಾಪನೆಯಾಗಲಿದೆ ಎಂಬ ಭರವಸೆ ಅವರು ನೀಡಿದ್ದಾರೆ.
ಬೆಂಗಳೂರು ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ನಡೆಸಿದ ಸಂವಾದದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕರ್ನಾಟಕವನ್ನು ಆರೋಗ್ಯದ ಮಾದರಿ ರಾಜ್ಯವನ್ನಾಗಿ ಮಾಡಲು ಗುರಿ ಇಟ್ಟಿದೆ. ಎಲ್ಲ ನಾಗರಿಕರಿಗೆ ಸಮರ್ಥ ಮತ್ತು ಸುಲಭ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಗಳು ರೂಪುಗೊಂಡಿವೆ” ಎಂದು ತಿಳಿಸಿದರು.
ಈ ಯೋಜನೆಯ ಭಾಗವಾಗಿ, ಜೈದೇವ ಹೃದ್ರೋಗ ಆಸ್ಪತ್ರೆಗಳ ಹೊಸ ಶಾಖೆಗಳನ್ನು ಹುಬ್ಬಳ್ಳಿ ಮತ್ತು ಬೆಳಗಾವಿ ನಗರಗಳಲ್ಲಿ ಸ್ಥಾಪನೆ ಮಾಡಲಾಗುತ್ತಿದೆ. ಹುಬ್ಬಳ್ಳಿಯಲ್ಲಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಉದ್ಘಾಟನೆಯಾಗಲಿದೆ. ಕಲಬುರಗಿಯಲ್ಲಿ ಈಗಾಗಲೇ ಜಯದೇವ ಶಾಖೆಯು ಕಾರ್ಯಾರಂಭವಾಗಿದೆ. ಮೈಸೂರು ಈಗಾಗಲೇ ಸಂಸ್ಥೆಯ ಶಾಖೆಯೊಂದನ್ನು ಹೊಂದಿದೆ.
“ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 100% ಪಾರದರ್ಶಕತೆ ಇದ್ದು, ಯಾವುದೇ ಸೀಟ್ ಬ್ಲಾಕಿಂಗ್ ನಮ್ಮಲ್ಲಿ ಇಲ್ಲ. ಎಲ್ಲಾ ಸೀಟುಗಳನ್ನು ಕೇವಲ ಮೆರಿಟ್ ಆಧಾರಿತವಾಗಿ ಕೆಇಎ ಮೂಲಕ ಹಂಚಲಾಗುತ್ತದೆ. ಮೇಡಿಕಲ್ ಸೀಟುಗಳು 800ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ” ಎಂದು ಪಾಟೀಲ್ ವಿವರಿಸಿದರು.
ರಾಜ್ಯದ ವಿವಿಧೆಡೆ ವೈದ್ಯಕೀಯ ಸೇವೆಗಳ ಅವಶ್ಯಕತೆ ಕುರಿತು ಕಾರ್ಯಕರ್ತರಿಂದ ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಆರೋಗ್ಯಸೇವೆಗಳ ಉತ್ತಮೀಕರಣ ಹಾಗೂ ಹೊಸ ಆಸ್ಪತ್ರೆಗಳ ಸ್ಥಾಪನೆಗಾಗಿ ಜನರ ಸಲಹೆಗಳನ್ನು ಪರಿಗಣಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಕಲಬುರಗಿ, ಧಾರವಾಡ, ಬಾಗಲಕೋಟೆ, ವಿಜಯಪುರ ಸೇರಿ ಹಲವು ಜಿಲ್ಲೆಗಳಲ್ಲಿ ಹೊಸ ಆಸ್ಪತ್ರೆಗಳ ಸ್ಥಾಪನೆಯ ಕಾರ್ಯ ಆರಂಭಗೊಂಡಿದೆ.
ಇನ್ನು ಯುವ ಉದ್ಯೋಗ ಸ್ಥಾಪನೆಯ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯುವ ನಿಧಿ ಯೋಜನೆಗೆ 2,86,000ಕ್ಕೂ ಹೆಚ್ಚು ಯುವಕರು ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವ ಉದ್ದೇಶದಿಂದ ಹಲವಾರು ಸುಧಾರಣೆಗಳನ್ನು ತರಲಾಗುತ್ತಿದೆ.