ಚಾಮರಾಜನಗರ: ರಾಷ್ಟ್ರೀಯ ಹಬ್ಬಗಳು ನಾಗರೀಕರಲ್ಲಿ ರಾಷ್ಟ್ರೀಯ ಚಿಂತನೆ ,ದೇಶಭಕ್ತಿ, ರಾಷ್ಟ್ರಧ್ವಜ ಹಾಗೂ ರಾಷ್ಟ್ರಕ್ಕಾಗಿ ದುಡಿದ ಮಹಾತ್ಯಾಗಿಗಳ ಸ್ಮರಣೆಗೆ ಸ್ಪೂರ್ತಿಯನ್ನು ನೀಡುತ್ತದೆ ಎಂದು ಪ್ರಾಚಾರ್ಯರಾದ ಶಿವನಂಜಪ್ಪ ತಿಳಿಸಿದರು.
ಅವರು ಅಮಚವಾಡಿಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ರಾಷ್ಟ್ರಕ್ಕಾಗಿ ಸೇವೆ ಮತ್ತು ತ್ಯಾಗ ಮಾಡುವ ಗುಣವನ್ನು ಬೆಳಸಿಕೊಳ್ಳಬೇಕು. ಭಾರತದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ಅರ್ಪಿಸಿಕೊಂಡಿದ್ದಾರೆ .ಅವರೆಲ್ಲರ ಗೌರವ ಹಾಗೂ ಅವರ ಇತಿಹಾಸ ತಿಳಿಯಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಉಪನ್ಯಾಸಕಿ ರಾಜೇಶ್ವರಿ ಮಾತನಾಡಿ ವಿದ್ಯಾರ್ಥಿಗಳು ಜ್ಞಾನದ ಕಣಜಗಳಾಗಿ ಗ್ರಾಮಕ್ಕೆ ನಾಡಿಗೆ ಕೀರ್ತಿ ತರಬೇಕು. ಸ್ವಾತಂತ್ರ ಮಾನವನ ಅಭ್ಯುದಯಕ್ಕೆ ಹಾಗೂ ಅಭಿವೃದ್ಧಿಗೆ ನೂರಾರು ಅವಕಾಶಗಳನ್ನು ನೀಡಿದೆ. ಸದ್ಬಳಕೆ ಮಾಡಿಕೊಂಡು ಉನ್ನತಿಯನ್ನು ಸಾಧಿಸಿ ಎಂದು ತಿಳಿಸಿದರು.

ಸ್ವಾತಂತ್ರ್ಯ ಚಳುವಳಿಯ ಇತಿಹಾಸದ ಬಗ್ಗೆ ಮಾತನಾಡಿದ ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ಭಾರತದ ರಾಷ್ಟ್ರಧ್ವಜ ಕೇಸರಿ ಬಿಳಿ ಹಸಿರು ಇಡೀ ಜಗತ್ತಿನ ಹೆಮ್ಮೆಯ ಸಂಕೇತವಾಗಿದೆ. ರಾಷ್ಟ್ರಧ್ವಜವು ನಮ್ಮೆಲ್ಲರ ಆತ್ಮಶಕ್ತಿ. ಸ್ವಾಭಿಮಾನ ದೇಶಾಭಿಮಾನದ ಗುರುತಾಗಿದೆ. ನಮ್ಮದೇ ಆದ ರಾಷ್ಟ್ರಧ್ವಜ ಸ್ಥಾಪನೆಗೆ ಸ್ವಾತಂತ್ರ್ಯದ ಹೋರಾಟದಲ್ಲಿ ಲಕ್ಷಾಂತರ ಸ್ವಾತಂತ್ರ ಪ್ರೇಮಿಗಳು ರಕ್ತ ತರ್ಪಣವನ್ನು ನೀಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ,ಸಂಗೊಳ್ಳಿ ರಾಯಣ್ಣ , ಝಾನ್ಸಿ ರಾಣಿ ಲಕ್ಷ್ಮೀಬಾಯಿ ,ತಾತ್ಯಾ ಟೋಪಿ, ಬೇಗಮ್ ಹಜರತ್ ಮಹಲ್, ಗೋಪಾಲಕೃಷ್ಣ ಗೋಖಲೆ , ಬಿಪಿನ್ ಚಂದ್ರ ಪಾಲ್, ಬಾಲಗಂಗಾಧರ ತಿಲಕ್, ಭಗತ್ ಸಿಂಗ್ ,ರಾಜಗುರು ಸುಖದೇವ್, ಮದನ್ ಲಾಲ್ ಧಿಂಗ್ರಾ, ಆಲ್ಫಾ ಖಾನ್, ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್ ಮುಂತಾದವರು ತಮ್ಮ ಪ್ರಾಣವನ್ನು ಅರ್ಪಿಸಿಕೊಂಡಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ನೂರಾರು ಕ್ರಾಂತಿಕಾರಿಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷ್ ಸರ್ಕಾರ ನಿರ್ದಯವಾಗಿ ಕಠಿಣ ಶಿಕ್ಷೆಗೆ ಒಳಪಡಿಸಿತ್ತು. ಭಾರತದ ಖಾದಿಯನ್ನು ಹಾಗೂ ಗುಡಿ ಕೈಗಾರಿಕೆಯನ್ನು ನಾಶಗೊಳಿಸಲು ಲಕ್ಷಾಂತರ ನೇಕಾರರ ಕೈಗಳನ್ನು ಕತ್ತರಿಸಿ ,ಭಾರತದ ಗುಡಿ ಕೈಗಾರಿಕೆಯನ್ನು ನಾಶಪಡಿಸಲಾಯಿತು. ಖಾದಿ ನಮ್ಮ ಹೆಮ್ಮೆಯ ಸಂಕೇತ .ಖಾದಿಯನ್ನು ಹೆಚ್ಚು ಬಳಸುವ ಬಗ್ಗೆ ಜಾಗೃತಿ ಮೂಡಬೇಕು ಎಂದರು.
ಹಿರಿಯ ಉಪನ್ಯಾಸಕ ಮೂರ್ತಿ ಭಾರತದ ರಾಷ್ಟ್ರೀಯ ಸ್ವಾತಂತ್ರ್ಯದ ಹೋರಾಟದ ವಿವಿಧ ಹಂತಗಳನ್ನು ವಿವರಿಸಿದರು. ಅಮಚವಾಡಿ ಪದವಿ ಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳನ್ನು ದೇವಿರಮ್ಮ, ಲತಾ, ಮಹಾಲಕ್ಷ್ಮಿ, ಗೀತಾ ,ಪ್ರವೀಣ್, ಮಧು,ಶಶಿಕಲಾ, ಶೀಲಾ ,ನಾಗಲಾಂಬಿಕೆ ರವರನ್ನೂ ಅಮಚವಾಡಿಯ ಎಪಿಆರ್ ಸೇವಾ ಸಂಸ್ಥೆಯ ರಾಜೇಂದ್ರ ರವರು ತಮ್ಮ ಸಂಸ್ಥೆಯ ಮೂಲಕ ಅಭಿನಂದಿಸಿ ಸನ್ಮಾನಿಸಿದರು.
ವಿದ್ಯಾರ್ಥಿಗಳು 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂಕೇತವಾಗಿ ಗಿಡವನ್ನು ನೆಟ್ಟರು.ಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಉಪನ್ಯಾಸಕರಾದ ಬಸವಣ್ಣ, ರಮೇಶ್ ,ಸುರೇಶ್ ಮುಂತಾದವರು ಉಪಸ್ಥಿತರಿದ್ದರು.