ಬೆಂಗಳೂರು: ಧರ್ಮಸ್ಥಳ ಕ್ಷೇತ್ರ ಮತ್ತು ನಮ್ಮ ಬಗ್ಗೆ ಕೇಳಿ ಬರುತ್ತಿರುವ ಆಪಾದನೆಗಳಿಂದ ನೋವುಂಟಾಗಿದೆ. ಇಂತಹ ಆರೋಪಗಳು ಆಧಾರರಹಿತ ಮತ್ತು ಹೋರಾಟ ನಡೆಸಲು ಆಯ್ಕೆ ಮಾಡಿಕೊಂಡಿರುವ ಅನೈತಿಕ ಮಾರ್ಗ ಎಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ತಮ್ಮ ಕುಟಂಬದ ಸದಸ್ಯರ ಮೇಲೆ ಕೇಳಿ ಬಂದ ಆರೋಪಗಳನ್ನು ಕುರಿತು ತನಿಖೆ ನಡೆಸಲು ಸರ್ಕಾರ ಎಸ್ ಐಟಿ ರಚಿಸಿದ ನಂತರ ಇದೇ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಹೆಗ್ಗಡೆಯವರು ಮಾತನಾಡಿದ್ದಾರೆ.
ನಮ್ಮ ಕುಟುಂಬದ ಮೇಲೆ ಕೇಳಿ ಬಂದಿರುವ ಆರೋಪಗಳು ನಿರಧಾರ. ಈ ಆರೋಪಗಳನ್ನು ಸೃಷ್ಟಿಸಲಾಗಿದ್ದು, ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದರಿಂದ ನಮ್ಮ ಮನಸ್ಸಿಗೆ ನೋವುಂಟಾಗಿದೆ. ಸಾರ್ವಜನಿಕರು ಮತ್ತು ಭಕ್ತರೂ ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ಕ್ಷೇತ್ರದ ಕೆಲಸ ಕಾರ್ಯಗಳು ಯಥಾಪ್ರಕಾರ ನಡೆಯುತ್ತಿವೆ ಎಂದು ಹೇಳಿದರು.
ನಮ್ಮ ಮತ್ತು ಕ್ಷೇತ್ರದ ಬಗ್ಗೆ ಭಕ್ತರಿಗೆ ಸಂಪೂರ್ಣ ನಂಬಿಕೆ ಇದ್ದು, ಅವರೇ ಸುಳ್ಳು ಅರೋಪಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ನಮ್ಮ ಭಕ್ತರ ಮನಸ್ಸಿನಲ್ಲಿ ಇಲ್ಲ ಸಲ್ಲದ ಗೊಂದಲಗಳನ್ನು ಮೂಡಿಸಲಾಗುತ್ತಿದೆ. ಸಮರ್ಪಕ ತನಿಖೆಯಿಂದ ಈ ಸಂಶಯಗಳು ನಿವಾರಣೆಯಾಗುತ್ತವೆ ಎಂದರು.
ನನಗೆ ಮೂವರು ಸಹೋದರರು ಮತ್ತು ಓರ್ವ ಸಹೋದರಿ ಇದ್ದಾರೆ. ಇಬ್ಬರು ಸಹೋದರರು ಧರ್ಮಸ್ಥಳದ ದೈನಂದಿನ ಕೆಲಸ ಕಾರ್ಯಗಳು ಮತ್ತು ಶಿಕ್ಷಣ ಸಂಸ್ಥೆಗಳ ಜವಬ್ದಾರಿ ಹೊತ್ತಿದ್ದಾರೆ. ಮತ್ತೊಬ್ಬರು ಸ್ವತಂತ್ರರಾಗಿದ್ದಾರೆ. ಸಹೋದರಿಯ ಪತಿ ಧಾರವಾಡ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾರೆ ಎಂದು ಕುಟುಂಬದ ಪರಿಚಯ ಮಾಡಿಕೊಟ್ಟರು.
ಆರೋಪಗಳನ್ನು ಕುರಿತು ಎಸ್ ಐಟಿ ರಚಿಸಿದಾಗ ನಾವು ಸ್ವಾಗತಿಸಿದ್ದೇವೆ. ಸರ್ಕಾರದ ನಿರ್ಧಾರವನ್ನು ಒಪ್ಪಿಕೊಂಡಿದ್ದೇವೆ. ತನಿಖೆಯಿಂದ ಸತ್ಯಾಂಶ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.