ರಾಮನಗರ: ಶೈಕ್ಷಣಿಕ ಕ್ಷೇತ್ರದಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಮಹತ್ವದ ಸ್ಥಾನವಿದೆ. ಅದರಲ್ಲೂ ಸಾಂಸ್ಕೃತಿಕ ಸೌರಭ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ವಿಶಿಷ್ಟ ಪಾತ್ರ ವಹಿಸುತ್ತಿವೆ ಎಂದು ಸಮಾಜ ಸೇವಕ ಎಚ್.ಎಂ. ನಾಗೇಶ್ ಅವರು ಅಭಿಪ್ರಾಯಪಟ್ಟರು.
ಅವರು ಚನ್ನಪಟ್ಟಣದ ಶ್ರೀ ಯೋಗನರಸಿಂಹಸ್ವಾಮಿ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ಸೌರಭ 2025ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಲೆ–ಸಂಸ್ಕೃತಿ, ನೃತ್ಯ–ಗಾನ, ನಾಟಕ–ಕಾವ್ಯ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಹೊಮ್ಮಿಸುವುದರ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ಅರಿತುಕೊಳ್ಳುತ್ತಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್, ಇಂತಹ ಕಾರ್ಯಕ್ರಮಗಳು ಸಹಕಾರ ಮನೋಭಾವ, ಸೇವಾಭಾವ, ಸಹಾನುಭೂತಿ ಮತ್ತು ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುತ್ತವೆ ಎಂದರು.
ಸಮಾಜದ ಸಮಸ್ಯೆಗಳ ಅರಿವು ಮೂಡಿಸುವ ಜೊತೆಗೆ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಬೆಳೆಸಿ, ಹೊಣೆಗಾರ ನಾಗರಿಕರಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತವೆ. ಅದರಿಂದ, ಸಾಂಸ್ಕೃತಿಕ ಸೌರಭವು ಕೇವಲ ಕಲಾತ್ಮಕ ವೇದಿಕೆಯಲ್ಲ; ಅದು ಸಾಮಾಜಿಕ ಜವಾಬ್ದಾರಿಯ ಅರಿವಿಗೆ ದಾರಿಯೂ ಹೌದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮವನ್ನು ಪ್ರೇರಣೆಯನಾಗಿಸಿಕೊಂಡು ತಾವು ಕೂಡ ಬಹುಮುಖ ಪ್ರತಿಭೆಯಾಗಿ ರುಪುಗೊಳ್ಳಬೇಕೆಂದರು.
ಉಪನ್ಯಾಸಕ ಬಿ.ಪಿ. ಸುರೇಶ್ ನಿರೂಪಿಸಿದರು. ಶಾಲೆಯ ಮುಖ್ಯೋಪಾದ್ಯಾಯ ಚಿಕ್ಕ ತಿಮ್ಮಶೆಟ್ಟಿ ಸ್ವಾಗತಿಸಿದರು. ಕಲಾಸಂಘಟಕದ ಜಯಸಿಂಹ ವಂದಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಪ್ರದೇಶದ ಕಲಾ ಸಂಯೋಜಕ ಡೋಳ್ ಚಂದ್ರು ನೇತೃತ್ವದಲ್ಲಿ ಯಕ್ಷಗಾನ, ಸಮೂಹ ನೃತ್ಯ, ವೀರಗಾಸೆ, ತವಟೆ ವಾದನ ಮುಂತಾದ ಆಕರ್ಷಕ ಕಲಾತಂಡಗಳು ಪ್ರದರ್ಶಿಸಿದರು.
ಗಾಯಕ ಸರ್ವೋತ್ತಮ್ ಸ್ಪಂದನ, ಜಿವೋದಯಾ ಕಲಾತಂಡದ ಆನಿಯಂಬಾಡಿ, ಶೇಖರ್, ಚಕ್ಕೆರೆ ಸಿದ್ದರಾಜು, ಗಂಗಾಧರ್ ಸುಣ್ಣಘಟ್ಟ, ಮೇರಿ ಮುಂತಾದವರು ಗಾಯನದಲ್ಲಿ ಜೊತೆಯಾದರು. ವಾದ್ಯಗೋಷ್ಠಿಯಲ್ಲಿ ಕೃಷ್ಣಮೂರ್ತಿ, ಟಿ. ನರಸೀಪುರ ರಾಜು, ಕೃಷ್ಣಾಪುರ ಸಿದ್ದಪ್ಪ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಮರಿಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಯೋಗ ನರಸಿಂಹ ಸ್ವಾಮಿ ಪ್ರೌಢಶಾಲೆಯ ಕಾರ್ಯದರ್ಶಿಗಳಾದ ತಿಮ್ಮರಾಯಿ ಗೌಡ, ಸಹ ಕಾರ್ಯದರ್ಶಿ ಗಂಗರಾಜು, ಎಂ.ಬಿ. ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಬಿ.ಎಸ್, ಸಮಾಜ ಸೇವಕ ಮತ್ತು ಉದ್ಯಮಿ ಜಗದೀಶ್, ಕ.ರ.ವೇಯ ಸಾಗರ್, ಮುಂತಾದವರು ಉಪಸ್ಥಿತರಿದ್ದರು.