ಬೆಂಗಳೂರು : ಪ್ರಮುಖ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಯ ಹಿನ್ನಲೆ ಅದೆಷ್ಟೋ ಜನ ಮನೆಗೆ ಹೋಗಲು ಪ್ಲಾನ್ ಮಾಡುತ್ತಿದ್ದಾರೆ. ಈ ಹಿನ್ನಲೆ ಸರ್ಕಾರ ಹೆಚ್ಚುವರಿ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಆದರೆ ಇನ್ನೊಂದೆಡೆ ಬೆಂಗಳೂರಿನಿಂದ ಊರಿಗೆ ಹೋಗುವವರಿಗೆ ಖಾಸಗಿ ಬಸ್ ಗಳು ಬೆಲೆ ಏರಿಕೆ ಮಾಡಲಾಗಿದ್ದು, ಈ ಮೂಲಕ ಪ್ರಯಾಣಿಕರಿಗೆ ಶಾಕ್ ನೀಡಿದೆ.
ಗಣೇಶ ಚತುರ್ಥಿಯ ಹಿನ್ನಲೆ ಜನರೆಲ್ಲ ಕುಟುಂಬ ಸಮೇತ ಊರಿಗೆ ಮರಳಲು ಪ್ಲಾನ್ ಮಾಡಿಕೊಂಡಿದ್ದರು. ಇದೀಗ ಪ್ಲಾನ್ ಹಾಕಿಕೊಂಡವರಿಗೆ ಖಾಸಗಿ ಬಸ್ ಗಳು ಬಿಗ್ ಶಾಕ್ ನೀಡಿದ್ದು, ಊರಿಗೆ ಹೋಗೋದೇ ಬೇಡ ಎನ್ನುವಂತಹ ಪರಿಸ್ಥಿತಿ ತಂದಿದೆ.
ಬೆಂಗಳೂರು-ಧರ್ಮಸ್ಥಳ ಪ್ರಯಾಣ ದರ ಸಾಮಾನ್ಯವಾಗಿ 600–1,100 ರೂ ಇದ್ದದ್ದು, ಇದೀಗ 1,499–2,600ಕ್ಕೆ ಏರಿದೆ. ಬೆಂಗಳೂರು-ಮೈಸೂರು ಪ್ರಯಾಣ ದರ ಸಾಮಾನ್ಯವಾಗಿ 199–2,000 ರೂ ಇದ್ದದ್ದು, ಇದೀಗ 300–5,000 ಆಗಿದೆ. ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ಸಾಮಾನ್ಯ ದಿನಗಳಲ್ಲಿ 609–1,800 ಟಿಕೆಟ್ ಬೆಲೆ ಇದ್ದು, ಇದೀಗ 1,200–9,999ಕ್ಕೆ ಹೆಚ್ಚಿಸಲಾಗಿದೆ.
ಅದರಲ್ಲೂ ಮಂಗಳೂರು, ಉಡುಪಿ, ಕಾರ್ಕಳ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಧಾರವಾಡ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಟಿಕೆಟ್ ದರ ದುಪ್ಪಟ್ಟು ಮಾಡಲಾಗಿದೆ. ಸದ್ಯ ಬಸ್ ಮಾಲೀಕರ ಈ ನಿರ್ಧಾರದಿಂದ ಪ್ರಯಾಣಿಕರು ಕಂಗಾಲಾಗಿದ್ದಾರೆ.
ಇನ್ನೊಂದೆಡೆ ಆಗಸ್ಟ್ 25 ರಿಂದ 31 ರವರೆಗೆ ಕೆಎಸ್ಆರ್ಟಿಸಿ 1,500 ಹೆಚ್ಚುವರಿ ಬಸ್ಗಳನ್ನು ನಿಯೋಜನೆ ಮಾಡಲಾಗಿದ್ದು, ಬೆಂಗಳೂರಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳು ಮತ್ತು ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇರಳಕ್ಕೆ ಬಸ್ ಸೇವೆ ಒದಗಿಸಲಾಗಿದೆ.
ಖಾಸಗಿ ಬಸ್ ಗಳ ಟಿಕೆಟ್ ದರ ಏರಿಕೆಯ ಹಿನ್ನಲೆ ಸಾರ್ವಜನಿಕರ ಬೇಡಿಕೆ ಮೇರೆಗೆ ಬೆಂಗಳೂರು, ಮಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲು ಕಾರ್ಯಾಚರಣೆ ಆರಂಭವಾಗಲಿದೆ. ಈ ಬಗ್ಗೆ ನೈಋತ್ಯ ರೈಲ್ವೆಯು ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಮಾಹಿತಿ ನೀಡಿದೆ.
ಬೆಂಗಳೂರಿನಿಂದ ಮಡಗಾಂವ್ ಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದ್ದು, ಈ ಮೂಲಕ ಬೆಂಗಳೂರಿನಿಂದ ರೈಲು ಆಗಸ್ಟ್ 26 ರಂದು ಎಸ್ಎಮ್ವಿಟಿ ಬೆಂಗಳೂರಿನಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ನಸುಕಿನ ಜಾವ 5:30ಕ್ಕೆ ಮಡಗಾಂವ್ ಗೆ ತಲುಪಲಿದೆ.
ಇನ್ನು ಇದೇ ರೈಲು ಆಗಸ್ಟ್ 27 ರಂದು ಬೆಳಿಗ್ಗೆ 6:30ಕ್ಕೆ ಮಡಗಾಂವ್ನಿಂದ ಹೊರಟು ಅದೇ ದಿನ ರಾತ್ರಿ 11:40 ಎಸ್ಎಮ್ವಿಟಿ ಬೆಂಗಳೂರು ತಲುಪಲಿದೆ. ಬೆಂಗಳೂರು-ಬೀದರ್ ರೈಲು ಆಗಸ್ಟ್ 26 ರಂದು ರಾತ್ರಿ 9:15ಕ್ಕೆ ಎಸ್ಎಮ್ವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 11:30ಕ್ಕೆ ಬೀದರ್ ತಲುಪಲಿದೆ. ಇದೇ ರೈಲು ವಾಪಸ್ 06550: ಬೀದರ್ನಿಂದ ಆಗಸ್ಟ್ 27 ರಂದು ಮಧ್ಯಾಹ್ನ 2:30ಕ್ಕೆ ಹೊರಟು ಮರುದಿನ ನಸುಕಿನ ಜಾವ 4:30ಕ್ಕೆ ಎಸ್ಎಮ್ವಿಟಿ ಬೆಂಗಳೂರು ತಲುಪಲಿದೆ.
ಇನ್ನುಳಿದಂತೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಮಂಗಳೂರಿಗೆ ನಾಲ್ಕು ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಪ್ರಯಾಣಿಕರಿಗೆ ಊರಿಗೆ ಹೋಗಲು ಸಹಾಯಕವಾಗಲಿದೆ.