ಮೈಸೂರು : ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ವಿಚಿತ್ರವಾಗಿ ಕೊಲೆ ಮಾಡಿರುವ ಆರೋಪ ಮೈಸೂರಿನಲ್ಲಿ ಕೇಳಿಬಂದಿದೆ. ಹೌದು ಆಸಾಮಿಯೊಬ್ಬ ಮಹಿಳೆಯ ಬಾಯಿಯಲ್ಲಿ ಮೊಬೈಲ್ ಫೋನ್ ಇಟ್ಟು, ವೈರ್ಗಳ ನೆರವಿನಿಂದ ಮೊಬೈಲ್ ಬ್ಯಾಟರಿಯನ್ನು ಸಿಡಿಸಿ ಮಹಿಳೆಯ ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಸಿದ್ದರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಈತ ಪಿರಿಯಾಪಟ್ಟಣ ತಾಲ್ಲೂಕಿನಭೇರ್ಯ ಗ್ರಾಮದ ಲಾಡ್ಜ್ನಲ್ಲಿ ತನ್ನ ಪ್ರೇಯಸಿಯನ್ನು ಹೀಗೆ ಬಾಯಲ್ಲಿ ಮೊಬೈಲ್ ಇಟ್ಟು ಕೊಲೆ ಮಾಡಿದ್ದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೀಗೆ ತನ್ನ ಪ್ರಿಯಕರನಿಂದಲೇ ಕೊಲೆಯಾದ ಮಹಿಳೆ ಮೈಸೂರಿನ ಹುಣಸೂರು ತಾಲ್ಲೂಕಿನ ಗೆರಸನಹಳ್ಳಿಯ 20 ವರ್ಷದ ರಕ್ಷಿತಾ. ಈಕೆ ಕೇರಳ ಮೂಲದ ವ್ಯಕ್ತಿಯನ್ನು ವಿವಾಹವಾಗಿದ್ದಳು ಎನ್ನಲಾಗಿದ್ದು, ವಿವಾಹದ ನಂತರವೂ ಮೃತ ಮಹಿಳೆ ಹಾಗೂ ಆರೋಪಿಯ ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ರಹಸ್ಯವಾಗಿ ಭೇಟಿಯಾಗಿದ್ದ ಈ ಜೋಡಿ ಕಪ್ಪಡಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.ಆ ಬಳಿಕ ಇಬ್ಬರೂ ಭೇರ್ಯಕ್ಕೆ ಬಂದು ಲಾಡ್ಜ್ನಲ್ಲಿ ತಂಗಿದ್ದರು ಎನ್ನಲಾಗಿದೆ.
ಆದ್ರೆ ಮರುದಿನ ಆರೋಪಿ ಸಿದ್ದರಾಜು ತಾನಾಗಿಯೇ ಪೊಲೀಸ್ ಠಾಣೆಗೆ ತೆರಳಿ, ತನ್ನ ಪ್ರೇಯಸಿ ಲಾಡ್ಜ್ ರೂಮ್ ನಲ್ಲಿ ಮೊಬೈಲ್ ಫೋನ್ ಸಿಡಿದು ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದಾನೆ. ಆ ಮೂಲಕ ತಾನು ಮಾಡಿದ ಕೊಲೆಯನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಆದ್ರೆ ಈತನ ಹೇಳಿಕೆಯ ಬಗ್ಗೆ ಪೊಲೀಸರು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಾಗ ಅನುಮಾನ ಮೂಡಿದೆ. ಮೃತ ಯುವತಿ ರಕ್ಷಿತ ಹಾಸಿಗೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿದ್ದು, ಬಾಯಿ ಮಾತ್ರ ಛಿದ್ರವಾಗಿತ್ತು. ಇನ್ನು ರೂಮ್ ನಲ್ಲಿ ಅಲ್ಲಲ್ಲಿ ಎಲೆಕ್ಟಿಕ್ ವೈರ್ಗಳು ಕೂಡ ಸಿಕ್ಕಿವೆ. ಹೀಗಾಗಿ ಸ್ಥಳ ಪರಿಶೀಲನೆ ವೇಳೆ ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ಆರೋಪಿಯೇ ಕೊಲೆ ಮಾಡಿರುವುದಾಗಿ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.
ಈತ ಮಹಿಳೆ ಮಲಗಿದ್ದ ವೇಳೆ ಆಕೆಯ ಬಾಯಿಯಲ್ಲಿ ಮೊಬೈಲ್ ಫೋನ್ ಇಟ್ಟು, ವೈರ್ಗಳನ್ನು ಬಳಸಿ ಮೊಬೈಲ್ ನ ಬ್ಯಾಟರಿಯನ್ನು ಸ್ಫೋಟಿಸಿರುವ ಹಾಗೆ ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಈ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಸಿಪಿಐ ಶಶಿಕುಮಾರ್ ಅವರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡಿದ್ದಾರೆ.