ಮೈಸೂರು :ಸೋಮವಾರ ಹುಟ್ಟೂರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಸಿದ್ದರಾಮನಹುಂಡಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಶಾಲೆಯ ಉದ್ಘಾಟನೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಹುಟ್ಟೂರಿನಲ್ಲಿ ಅದ್ದೂರಿಯಾಗಿ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.
ಈ ವೇಳೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ರಾಜಕೀಯವಾಗಿ ಯಾತ್ರೆ ಮಾಡುತ್ತಿದೆ, ಮಾಡಲಿ ಬಿಡಿ. ಅವರಿಗೆ ಇದರಿಂದ ರಾಜಕೀಯ ಲಾಭ ಸಿಗೋದಿಲ್ಲ. ಎಸ್ ಐ ಟಿ ಆದಾಗ ಯಾಕೆ ಬಿಜೆಪಿ ಅವರು ಯಾತ್ರೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೇ ಬಿಜೆಪಿಯಿಂದ ಚಾಮುಂಡಿ ಚಲೋ ವಿಚಾರವಾಗಿ ಮಾತನಾಡಿ, ಹಿಂದುತ್ವ ಗಟ್ಟಿ ಆಗುತ್ತೇ ಎಂದು ಬಿಜೆಪಿ ಈ ಯಾತ್ರೆಗಳ ಪ್ಲಾನ್ ಮಾಡುತ್ತಿದೆ. ಇವರಿಂದ ಹಿಂದುತ್ವ ಗಟ್ಟಿಯಾಗಲ್ಲ. ಇದು ಡೋಂಗಿತನ ಎಂದು ಟೀಕಿಸಿದರು.

ನಾನು ಕೂಡ ಹಿಂದೂ ನಾವೆಲ್ಲರೂ ಕೂಡ ಹಿಂದೂ ನಾನು ನಮ್ಮ ಊರಲ್ಲಿ ರಾಮಮಂದಿರ ಕಟ್ಟಿಸಿದ್ದೇನೆ. ಹಿಂದೂಗಳು ಎಂದರೆ ಸುಳ್ಳು ಹೇಳುವುದು, ಅಪಪ್ರಚಾರ, ಮಾಡುವುದಲ್ಲ. ಮನುಷ್ಯತ್ವ ಇರುವವರು ಹಿಂದೂಗಳು. ಅಮಾನವೀಯ ನಡವಳಿಕೆ ತೋರುವವರು ಹಿಂದೂಗಳಲ್ಲ. ಬಿಜೆಪಿಯವರು ದಸರಾದಲ್ಲೂ ರಾಜಕೀಯ ಮಾಡ್ತಿದ್ದಾರೆ.
ಅವರ ಮನೇನೂ ಬೇಕಾದರೆ ರಾಜಕೀಯಕ್ಕೆ ಬಳಸಿ ಕೊಳ್ಳುತ್ತಾರೆ. ಸುಳ್ಳು ಹೇಳುವುದು ಬಿಟ್ಟು ಬಿಜೆಪಿ ಯವರಿಗೆ ಏನು ಗೊತ್ತು? ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದರು.
ಬಿಜೆಪಿ ಹೋರಾಟದಿಂದ ದಸರಾ ಮೇಲೆ ಯಾವ ರೀತಿಯ ಕೆಟ್ಟ ಪರಿಣಾಮವೂ ಬೀರುವುದಿಲ್ಲ. ಹಿಂದೂಗಳೆಲ್ಲಾ ಬಿಜೆಪಿ ಜೊತೆ ಇಲ್ಲ ಎಂದು ನುಡಿದ ಸಿಎಂ ಸಿದ್ದರಾಮಯ್ಯ ಚಾಮುಂಡಿ ಬೆಟ್ಟ ಹಿಂದೂಗಳದ್ದಲ್ಲ ಎಂಬ ಡಿ ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯೇ ಇರಬಹುದು. ಈಗ ವಿಚಾರ ಇರುವುದು ದಸರಾ, ಚಾಮುಂಡಿ ಬೆಟ್ಟದ್ದು ಅಲ್ಲ. ದಸರಾ ನಾಡಹಬ್ಬ, ನಾಡಹಬ್ಬ ಎಲ್ಲರಿಗೂ ಸೇರಿದ್ದು. ಡಿ ಕೆ ಶಿವಕುಮಾರ್ ಹೇಳಿದ್ದು ನನಗೆ ಗೊತ್ತಿಲ್ಲ. ದಸರಾ ವಿಚಾರ ಮಾತ್ರ ಈಗ ಚರ್ಚೆಯಲ್ಲಿ ಇದೆ. ಚಾಮುಂಡಿ ಬೆಟ್ಟದ್ದು ಅಲ್ಲ ಎಂದರು.

ನನ್ನ ಸ್ವಗ್ರಾಮದಲ್ಲಿ ನಾನು ಐದರಿಂದ ಏಳನೇ ತರಗತಿಯಲ್ಲಿ ಓದಿದ ಶಾಲೆಗೆ ಹೊಸ ಕಟ್ಟಡ ಕಟ್ಟಿಸಿದ್ದೇನೆ. ಈ ಊರಿಗೆ ಪ್ರಾಥಮಿಕ ಶಾಲೆ, ಹೈಸ್ಕೂಲ್, ಪಿಯುಸಿ ಕಾಲೇಜು ಆಗಿದೆ.
ವಿದ್ಯಾರ್ಥಿಗಳು ಸಿಗಲ್ಲ ಅಂತಾ ಡಿಗ್ರಿ ಕಾಲೇಜು ಮಾತ್ರ ಮಾಡಿಲ್ಲ. ಎಲ್ಲಾ ರೀತಿಯ ವೈದ್ಯಕೀಯ ಸೇವೆ ಕಲ್ಪಿಸಿದ್ದೇನೆ. ಊರಿನ ಋಣ ಯಾವಾಗಲೂ ಇದ್ದೇ ಇರುತ್ತದೆ, ಅದು ಯಾವಾಗಲೂ ಮುಗಿಯದ ಋಣ ಎಂದು ಸಿದ್ದರಾಮಯ್ಯ ಭಾವುಕರಾದರು.